ADVERTISEMENT

ಯಾವ ಧರ್ಮವೂ ಆಡಂಬರದ ಆಚರಣೆ ಬೋಧಿಸದು: ಹರ್ಷವರ್ಧನ್

ಕೋವಿಡ್‌: ಹಬ್ಬಗಳ ಸಂಭ್ರಮದ ನಡುವೆಯೂ ಮಾರ್ಗಸೂಚಿ ಪಾಲನೆಗೆ ಮನವಿ

ಪಿಟಿಐ
Published 11 ಅಕ್ಟೋಬರ್ 2020, 15:15 IST
Last Updated 11 ಅಕ್ಟೋಬರ್ 2020, 15:15 IST
ಹರ್ಷವರ್ಧನ್‌
ಹರ್ಷವರ್ಧನ್‌   

ನವದೆಹಲಿ: ‘ಮುಂಬರುವ ಹಬ್ಬಗಳನ್ನು ಸರಳವಾಗಿ ಆಚರಿಸಬೇಕು. ಹಬ್ಬಗಳನ್ನು ಆಡಂಬರ, ಅಬ್ಬರದೊಂದಿಗೆ ಆಚರಿಸುವಂತೆ ಯಾವ ಧರ್ಮವೂ ಬೋಧಿಸುವುದಿಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಭಾನುವಾರ ಹೇಳಿದರು.

ಸಾಮಾಜಿಕ ಮಾಧ್ಯಮಗಳಲ್ಲಿನ ತಮ್ಮ ಹಿಂಬಾಲಕರೊಂದಿಗೆ ನಡೆಸಿದ ‘ಸಂಡೆ ಸಂವಾದ’ನಲ್ಲಿ ಮಾತನಾಡಿದ ಅವರು, ‘ಹಬ್ಬಗಳ ನೆಪದಲ್ಲಿ ಭಾರಿ ಸಂಖ್ಯೆಯಲ್ಲಿ ಒಂದೆಡೆ ಸೇರಬಾರದು. ಪ್ರತಿಯೊಬ್ಬರೂ ಕೋವಿಡ್‌–19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಪ್ರತಿಪಾದಿಸಿದರು.

‘ಈಗ ಜಗತ್ತೇ ಅಸಾಧಾರಣ ಪರಿಸ್ಥಿತಿ ಎದುರಿಸುತ್ತಿದೆ. ಇದಕ್ಕೆ ಅಸಾಮಾನ್ಯ ರೀತಿಯ ಸ್ಪಂದನೆಯೇ ಅಗತ್ಯ. ದೇವಸ್ಥಾನ, ಪೆಂಡಾಲ್‌ಗಳಿಗೇ ತೆರಳಿ ಪೂಜೆ ನೆರವೇರಿಸಬೇಕು, ಪ್ರಾರ್ಥನೆ ಸಲ್ಲಿಸಲು ಮಸೀದಿಗಳಿಗೇ ತೆರಳಬೇಕು ಎಂದು ಯಾವ ಧರ್ಮ, ದೇವರು ಸಹ ಹೇಳುವುದಿಲ್ಲ‘ ಎಂದರು.

ADVERTISEMENT

‘ಭಾರಿ ಸಂಖ್ಯೆಯಲ್ಲಿ ಒಂದೆಡೆ ಸೇರುವುದು, ಪೆಂಡಾಲ್‌ ಅಳವಡಿಸುವುದು ಬೇಡ. ಮನೆಯಲ್ಲಿಯೇ ಇದ್ದು, ನಿಮ್ಮ ಕುಟುಂಬದ ಸದಸ್ಯರು, ಆತ್ಮೀಯರೊಂದಿಗೆ ಹಬ್ಬಗಳನ್ನು ಆಚರಿಸಿ. ಕೊರೊನಾ ವೈರಸ್‌ ವಿರುದ್ಧ ಹೋರಾಡುವುದೇ ಪ್ರತಿಯೊಬ್ಬರ ಧರ್ಮವಾಗಬೇಕು. ಕೋವಿಡ್‌ನಿಂದ ಸಾವು ಸಂಭವಿಸುವುದನ್ನು ನಿಯಂತ್ರಿಸುವುದು ಆರೋಗ್ಯ ಸಚಿವನಾಗಿ ನನ್ನ ಧರ್ಮವಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.