ADVERTISEMENT

ಶೇ 40ರಷ್ಟು ಕಮೀಷನ್: ಪ್ರಧಾನಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ– ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 13:52 IST
Last Updated 28 ಮಾರ್ಚ್ 2022, 13:52 IST
ಕಾಂಗ್ರೆಸ್‌ ಸಂಸದ ಡಾ.ಎಲ್‌.ಹನುಮಂತಯ್ಯ
ಕಾಂಗ್ರೆಸ್‌ ಸಂಸದ ಡಾ.ಎಲ್‌.ಹನುಮಂತಯ್ಯ   

ನವದೆಹಲಿ: ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮದಲ್ಲಿ ₹ 4 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರೊಬ್ಬರ ಬಿಲ್‌ ಪಾವತಿಸಲು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಕಮೀಷನ್‌ಗೆ ಬೇಡಿಕೆ ಇರಿಸಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಸಂಸದ ಡಾ.ಎಲ್‌.ಹನುಮಂತಯ್ಯ, ಬಿಜೆಪಿ ಕಾರ್ಯಕರ್ತರೂ ಆಗಿರುವ ಹಿಂಡಲಗಾದ ಗುತ್ತಿಗೆದಾರ ಸಂತೋಷ್‌ ಪಾಟೀಲ್ ಅವರ ಬಿಲ್‌ ಪಾವತಿಸಲು ಹಣದ ಬೇಡಿಕೆ ಇರಿಸಲಾಗಿದೆ ಎಂದು ದೂರಿದರು.

ಟೆಂಡರ್‌ ಪ್ರಕ್ರಿಯೆ ಇಲ್ಲದೆ, ಸಚಿವ ಈಶ್ವರಪ್ಪ ಅವರ ಸೂಚನೆಯ ಮೇರೆಗೆ ಅಭಿವೃದ್ಧಿ ಕಾಮಗಾರಿ ನಡೆಸಿರುವ ಗುತ್ತಿಗೆದಾರ ಸಂತೋಷ್‌ ಪಾಟೀಲ ಅವರು, ಕಾಮಗಾರಿ ಪೂರ್ಣಗೊಂಡಿದ್ದರೂ ಕಮೀಷನ್‌ ಆಸೆಗಾಗಿ ಬಿಲ್‌ ಪಾವತಿಸುತ್ತಿಲ್ಲ ಎಂದು ದೂರಿ ಪ್ರಧಾನಿ, ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್‌ ಸಿಂಗ್‌, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌. ಸಂತೋಷ್‌ ಅವರಿಗೆ ಪತ್ರ ಬರೆದು ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದರು.

ADVERTISEMENT

ಗುತ್ತಿಗೆ ಕಾಮಗಾರಿಗಳ ಬಿಲ್‌ ಪಾವತಿಸಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿರುವ ಸಚಿವರು, ಶಾಸಕರು, ಅಧಿಕಾರಿಗಳು ಶೇ 40ರಷ್ಟು ಕಮೀಷನ್‌ಗೆ ಬೇಡಿಕೆ ಇರಿಸುತ್ತಿರುವುದಾಗಿ ರಾಜ್ಯ ಗುತ್ತಿಗೆದಾರರ ಸಂಘದ ಪ್ರಮುಖರು 2021ರ ಜುಲೈ 6ರಂದು ಪತ್ರಿಕಾಗೋಷ್ಠಿ ಆಯೋಜಿಸಿ ಆರೋಪಿಸಿದ್ದರೂ ಮುಖ್ಯಮಂತ್ರಿ, ಪ್ರಧಾನಿ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

2018ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ, ‘ಸಿದ್ದರಾಮಯ್ಯ ಅವರದು ಕಮೀಷನ್‌ ಸರ್ಕಾರ’ ಎಂದು ಆಧಾರರಹಿತ ಆರೋಪ ಮಾಡಿದ್ದರು. ಆದರೆ, ಅವರದೇ ಪಕ್ಷದ ನೇತೃತ್ವದ ರಾಜ್ಯ ಸರ್ಕಾರದಲ್ಲಿನ ಕಮೀಷನ್‌ ದಂಧೆಯ ಬಗ್ಗೆ ಬಿಜೆಪಿ ಕಾರ್ಯಕರ್ತರೇ ದೂರಿದರೂ ಮೂಕ ಪ್ರೇಕ್ಷಕರಾಗಿದ್ದಾರೆ. ಪ್ರಧಾನಿಯವರು ಕೂಡಲೇ ಎಚ್ಚೆತ್ತು ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಹೈಕೋರ್ಟ್‌ ನ್ಯಾಯಮೂರ್ತಿಯವರ ನೇತೃತ್ವದ ತನಿಖೆಗೆ ಆದೇಶಿಸುವ ಮೂಲಕ ಭ್ರಷ್ಟಾಚಾರ ಕೊನೆಗಾಣಿಸಲು ಮುಂದಾಗಬೇಕು ಎಂದು ಸಂಸದರಾದ ಡಿ.ಕೆ. ಸುರೇಶ್‌, ಸೈಯ್ಯದ್‌ ನಾಸಿರ್‌ ಹುಸೇನ್‌ ಹಾಗೂ ಜಿ.ಸಿ. ಚಂದ್ರಶೇಖರ್‌ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.