ಗ್ವಾಲಿಯರ್: ದೇಶದಲ್ಲಿ ಗೋಧಿಯ ಕೊರತೆ ಇಲ್ಲ.ವಿದೇಶಕ್ಕೆಬೇಕಾಬಿಟ್ಟಿರಫ್ತಾಗುವುದನ್ನು ತಡೆಯಲು ರಫ್ತು ನಿಷೇಧ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
‘ದೇಶದಲ್ಲಿ ಗೋಧಿಯ ಕೊರತೆ ಇಲ್ಲ, ನಮಗೆ ರಾಷ್ಟ್ರೀಯ ಹಿತಾಸಕ್ತಿಯೇ ಮೊದಲು. ದೇಶೀಯ ಮಾರುಕಟ್ಟೆಗಳಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ಕರ್ತವ್ಯ. ಅಧಿಕ ಪ್ರಮಾಣದ ಗೋಧಿ ರಫ್ತು ತಡೆಯಲು ನಿಷೇಧ ಹೇರಲಾಗಿದೆ. ನಾವು ದೇಶದ ಜನರ ಬೇಡಿಕೆಯನ್ನು ಪೂರೈಸಬೇಕು’ ಎಂದು ಅವರು ಹೇಳಿದ್ದಾರೆ.
ಏರುತ್ತಿರುವ ಶಾಖದಿಂದ ಉತ್ಪಾದನೆ ಕುಂಠಿತವಾಗುವ ಕಳವಳದ ನಡುವೆ ಏರುತ್ತಿರುವ ದೇಶೀಯ ಬೆಲೆಗಳನ್ನು ನಿಯಂತ್ರಿಸುವ ಕ್ರಮಗಳ ಭಾಗವಾಗಿ ಗೋಧಿ ರಫ್ತುಗಳ ಮೇಲೆ ನಿಷೇಧವನ್ನು ಘೋಷಿಸಲಾಯಿತು ಎಂದು ಹೇಳಿದ್ದಾರೆ.
ವಿದೇಶಗಳಲ್ಲಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚಿರುವುದರಿಂದ 2021–22ರ ಅವಧಿಯಲ್ಲಿ ಭಾರತದ ರಫ್ತು ಪ್ರಮಾಣವು ಸಾರ್ವಕಾಲಿಕ ದಾಖಲೆಯ 70 ಲಕ್ಷ ಟನ್ಗಳಷ್ಟಾಗಿತ್ತು. ಇದರ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ ಆಗಿದೆ.
ಭಾರತದ ಗೋಧಿ ರಫ್ತಿನ ಶೇಕಡ 50 ರಷ್ಟು ಬಾಂಗ್ಲಾದೇಶಕ್ಕೆ ಹೋಗುತ್ತದೆ.
‘ನಮ್ಮ ನೆರೆಯ ದೇಶಗಳು ನಮ್ಮ ಮೇಲೆ ಅವಲಂಬಿತವಾಗಿವೆ. ವಿಶ್ವದಾದ್ಯಂತ ಹಲವು ದೇಶಗಳು ಧಾನ್ಯಕ್ಕಾಗಿ ಭಾರತದತ್ತ ನೋಡುತ್ತವೆ. ನಮ್ಮ ನೆರೆಹೊರೆಯ ಬೇಡಿಕೆ ಪೂರೈಸುವ ಹೊಣೆಯೂ ನಮ್ಮ ಮೇಲಿದೆ’ ಎಂದು ತೋಮರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.