ವಿಶ್ವಸಂಸ್ಥೆ: ಪ್ರಸಕ್ತ ವರ್ಷ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿರುವ ‘ವಿಶ್ವ ಆಹಾರ ಕಾರ್ಯಕ್ರಮ’ (ಡಬ್ಲ್ಯುಎಫ್ಪಿ) ಸಂಸ್ಥೆಯ ಮುಖ್ಯಸ್ಥ ಡೇವಿಡ್ ಬೀಸ್ಲಿ ಅವರು, ವಿಶ್ವದ ಸಿರಿವಂತರು ತಾವು ಗಳಿಸಿದ್ದಲ್ಲಿ ಕೆಲ ಭಾಗವನ್ನು ಅಸಂಖ್ಯ ಜೀವಗಳ ರಕ್ಷಣೆಗೆ ಕೊಡುಗೆಯಾಗಿ ನೀಡಬೇಕು‘ ಎಂದು ಕೋರಿದ್ದಾರೆ.
ವಿಶ್ವದಾದ್ಯಂತ ಅಸಂಖ್ಯಾತ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಇವರ ಸಂಖ್ಯೆ ಮೊದಲು 135 ಕೋಟಿ ಇದ್ದುದು, ಕೋವಿಡ್ ಬಾಧಿಸಿದ ಬಳಿಕ 270 ಕೋಟಿಗೆ ಏರಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಈಗ ಮಾನವೀಯತೆಯ ನೆರವು ಬೇಕಾಗಿದೆ. ಜಗತ್ತು ಕವಲುದಾರಿಯಲ್ಲಿದೆ. ವಿಶ್ವದ ಸಿರಿವಂತರು ಈ ಸಂದರ್ಭದಲ್ಲಿ ನೆರವು ನೀಡಲು ಮುಂದಾಗಬೇಕು ಎಂದು ಅವರು ಮನವಿ ಮಾಡಿದರು.
ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ಶ್ರೀಮಂತರ ಆಸ್ತಿ ಮೌಲ್ಯ ಸಾಕಷ್ಟು ಪ್ರಮಾಣದಲ್ಲಿ ವೃದ್ಧಿಸಿದೆ ಎಂಬ ಕುರಿತ ಸ್ವಿಸ್ ಬ್ಯಾಂಕ್ನ ಅಧ್ಯಯನ ವರದಿ ಉಲ್ಲೇಖಿಸಿದರು.
ಕೋಟ್ಯಂತರ ಜನರ ಜೀವ ಉಳಿಸಲು ಕೆಲವೇ ಕೋಟಿಯಷ್ಟು ನೆರವು ನೀಡಿ. 2ನೇ ವಿಶ್ವಯುದ್ಧದ ನಂತರ ಮಾನವೀಯತೆಯ ನೆರವು ಅಗತ್ಯವಾಗಿರುವ ಎರಡನೇ ಸಂದರ್ಭ ಇದಾಗಿದೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.