ನವದೆಹಲಿ: ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳನ್ನು (ಯುಪಿಎಸ್ಸಿ) ಎದುರಿಸಲು ಪ್ರಸ್ತುತ ಇರುವ ಒಟ್ಟು ಪ್ರಯತ್ನಗಳ ಸಂಖ್ಯೆಯನ್ನು ಬದಲಿಸುವುದು ಸೂಕ್ತವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಯೋಮಿತಿ ಸಡಿಲಿಕೆ ಅವಕಾಶ ಪಡೆದ ಅಭ್ಯರ್ಥಿಗಳಿಗೆ ಅನುಕಂಪದ ದೃಷ್ಟಿಯಿಂದ ಪರೀಕ್ಷೆಗೆ ಹೆಚ್ಚುವರಿ ಅವಕಾಶವನ್ನು ಕಲ್ಪಿಸುವುದನ್ನು ಪರಿಗಣಿಸಬೇಕು ಎಂದು ಸಂಸದೀಯ ಸಮಿತಿಯು ಮಾರ್ಚ್ 24ರಂದು ಸಲಹೆ ನೀಡಿತ್ತು.
ಲೋಕಸಭೆಯಲ್ಲಿ ಸಿಬ್ಬಂದಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಈ ಕುರಿತ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದು, ಕೋವಿಡ್ ಕಾರಣದಿಂದಲೂ ಆಕಾಂಕ್ಷಿಗಳು ಹೆಚ್ಚುವರಿ ಅವಕಾಶ ಕೋರಿದ್ದರು. ಕೆಲವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ.
ಸುಪ್ರೀಂ ಕೋರ್ಟ್ ಈ ಸಂಬಂಧ ನೀಡಿದ ತೀರ್ಪುಗಳ ಆಧಾರದಲ್ಲಿ ಮನವಿಗಳನ್ನು ಪರಿಶೀಲಿಸಲಾಗಿದೆ. ಯುಪಿಎಸ್ಸಿ ಪರೀಕ್ಷೆಗೆ ಈಗ ಇರುವ ಅವಕಾಶಗಳ ಸಂಖ್ಯೆ ಪರಿಷ್ಕರಿಸುವುದು ಸೂಕ್ತವಲ್ಲ ಎಂದು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಐಪಿಎಸ್, ಐಎಎಸ್ ಮತ್ತು ಐಎಫ್ಎಸ್ ವೃಂದದ ಅಧಿಕಾರಿಗಳ ಆಯ್ಕೆಗೆ ಯುಪಿಎಸ್ಸಿ ವಾರ್ಷಿಕ ಪರೀಕ್ಷೆಯನ್ನು ನಡೆಸುತ್ತಿದೆ. ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಎಂದು ಮೂರು ಹಂತದಲ್ಲಿ ಈ ಪರೀಕ್ಷೆಯು ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.