ಮುಂಬೈ: ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೆಶನಾಲಯವು ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರಿಗೆ ಸೇರಿದ ಜಾಗಗಳ ಮೇಲೆ ದಾಳಿ ನಡೆಸಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ನವಾಬ್ ಮಲಿಕ್, ಕೇಂದ್ರದ ತನಿಖಾ ಸಂಸ್ಥೆಯು ಈ ದಾಳಿಗಳ ಮೂಲಕ ನನ್ನನ್ನು ಬೆದರಿಸಬಹುದು ಎಂಬ ತಪ್ಪು ಕಲ್ಪನೆಯಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮಹಾರಾಷ್ಟ್ರದ ವಕ್ಫ್ ಮಂಡಳಿಯ 30,000 ಘಟಕಗಳ ಮೇಲಿನ ತನಿಖೆಯನ್ನು ನಾನು ಸ್ವಾಗತಿಸುತ್ತೇನೆ. ವಕ್ಫ್ ಮಂಡಳಿಯು ಜಾರಿ ನಿರ್ದೆಶನಾಲಯದ ತನಿಖೆಗೆ ಬೇಕಾದ ಸಹಕಾರ ನೀಡಲಿದೆ ಎಂದಿದ್ದಾರೆ.
ಇದೇವೇಳೆ, ಲಖನೌದ ಶಿಯಾ ವಕ್ಫ್ ಮಂಡಳಿಯು ನೀಡಿರುವ ದೂರುಗಳ ತನಿಖೆಯನ್ನೂ ಇ.ಡಿ ನಡೆಸಲಿ ಎಂದಿದ್ದಾರೆ. ಈ ತರಹದ ದಾಳಿಗಳಿಂದಾಗಿ ನಾನು ಭಯಭೀತನಾಗುತ್ತೇನೆ ಎಂದು ಇ.ಡಿ ಅಧಿಕಾರಿಗಳು ಅಂದುಕೊಂಡಿದ್ದರೆ ಅದು ಅವರ ತಪ್ಪುಕಲ್ಪನೆ ಎಂದು ಅವರು ಹೇಳಿದ್ದಾರೆ. ನನ್ನ ವ್ಯವಹಾರಗಳ ದಾಖಲೆ ಜೊತೆ ಬಿಜೆಪಿ ಮುಖಂಡರ ದಾಖಲೆಗಳನ್ನೂ ಕಳುಹಿಸುತ್ತೇನೆ. ಇ.ಡಿ ಅವರ ಬಗ್ಗೆಯೂ ತನಿಖೆ ಮಾಡಲಿ ಎಂದಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಪುಣೆ ಮತ್ತು ಸುತ್ತಲಿನ ಪ್ರದೇಶದಲ್ಲಿ ನವಾಬ್ ಮಲಿಕ್ ಅವರಿಗೆ ಸೇರಿದ ಜಾಗಗಳ ಮೇಲೆ ಇಂದು ಬೆಳಗ್ಗೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.