ಜಮ್ಮು: ‘ಧರ್ಮದ ಹೆಸರಲ್ಲಿ ಜನರನ್ನು ಕೊಲ್ಲುವ ಗುಂಪುಗಳ ಜೊತೆ ರಾಜಕೀಯ ಪಕ್ಷಗಳನ್ನು ಹೋಲಿಸುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಶನಿವಾರ ಹೇಳಿದರು.
ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ತಮ್ಮ ಪುಸ್ತಕದಲ್ಲಿ ಹಿಂದುತ್ವವನ್ನು ಐಎಸ್ಐಎಸ್ ಮತ್ತು ಬೊಕೊ ಹರಾಮ್ ರೀತಿಯ ಸಂಘಟನೆಗಳಿಗೆ ಸಮೀಕರಿಸಿರುವುದು ವಿವಾದಕ್ಕೆ ಆಸ್ಪದವಾಗಿರುವುದರ ಹಿಂದೆಯೇ ಮೆಹಬೂಬಾ ಮುಫ್ತಿ ಈ ಹೇಳಿಕೆ ನೀಡಿದ್ದಾರೆ.
ಆರ್ಎಸ್ಎಸ್ ಮತ್ತು ಬಿಜೆಪಿಯು ಹಿಂದುತ್ವ ಮತ್ತು ಹಿಂದೂ ಧರ್ಮವನ್ನು ಹೈಜಾಕ್ ಮಾಡಿವೆ. ಸನಾತನ ಧರ್ಮವು ಕೋಮುವಾದವನ್ನು ಕಲಿಸುವುದಿಲ್ಲ ಎಂದು ಮೆಹಬೂಬಾ ಹೇಳಿದರು.
‘ಧರ್ಮದ ಹೆಸರಲ್ಲಿ ಹಿಂದು ಮತ್ತು ಮುಸ್ಲಿಮರು ಪರಸ್ಪರ ಹೊಡೆದಾಡಿಕೊಳ್ಳುವಂತೆಕೋಮುವಾದಿ ಪಕ್ಷಗಳು ಮಾಡುತ್ತವೆ. ಇಂಥ ಪಕ್ಷಗಳನ್ನು ಐಎಸ್ಐಎಸ್ ಅಥವಾ ಅಂತಹ ಯಾವುದೇ ಗುಂಪುಗಳಿಗೆ ಹೋಲಿಸಬಹುದು’ ಎಂದು ಪಿಡಿಪಿ ಕಚೇರಿಯಲ್ಲಿ ಮುಫ್ತಿ ಸುದ್ದಿಗಾರರಿಗೆ ತಿಳಿಸಿದರು.
ಖುರ್ಷಿದ್ ಅವರು ತಮ್ಮ ಕೃತಿಯಲ್ಲಿ, ‘ಸನಾತನ ಧರ್ಮ ಮತ್ತು ಋಷಿಗಳು ಮತ್ತು ಸಂತರಿಗೆ ತಿಳಿದಿರುವ ಶಾಸ್ತ್ರೀಯ ಹಿಂದೂ ಧರ್ಮವನ್ನು ಹಿಂದುತ್ವವಾದ ಪಕ್ಕಕ್ಕೆ ತಳ್ಳಿದೆ. ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವವು ಇಸ್ಲಾಂ ಜಿಹಾದಿ ಸಮೂಹಗಳ ರೀತಿಯಂತಾಗಿದೆ’ ಎಂದು ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.