
ನವದೆಹಲಿ: ಬಹುಕೋಟಿ ಮೌಲ್ಯದ ಓಬಳಾಪುರಂ ಗಣಿ ಕಂಪನಿ ಅದಿರು ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಐಎಎಸ್ ಅಧಿಕಾರಿ ವೈ.ಶ್ರೀಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾ ಮಾಡಿದೆ. ಈ ಮೂಲಕ ಅವರ ವಿಚಾರಣೆಗೆ ಇದ್ದ ಅಡ್ಡಿ ನಿವಾರಣೆ ಆಗಿದೆ.
ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇದ್ದ ಪೀಠವು, ಹಿರಿಯ ಐಎಎಸ್ ಅಧಿಕಾರಿ ವೈ.ಶ್ರೀಲಕ್ಷ್ಮಿ ಅವರನ್ನು ಪ್ರಕರಣದಿಂದ ಕೈಬಿಡಲು ನಿರಾಕರಿಸಿ ಈ ಹಿಂದೆ ತೆಲಂಗಾಣ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿಹಿಡಿಯಿತು.
2006–2009ರವರೆಗೆ ಆಂಧ್ರಪ್ರ ದೇಶ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿಯಾಗಿ ಶ್ರೀಲಕ್ಷ್ಮಿ ಕಾರ್ಯನಿರ್ವಹಿಸಿದ್ದರು. ಸಿಬಿಐ ತಾನು ಸಲ್ಲಿಕೆ ಮಾಡಿದ್ದ ಪೂರಕ ದೋಷಾರೋಪಣಾ ಪಟ್ಟಿಯಲ್ಲಿ ಶ್ರೀಲಕ್ಷ್ಮಿ ಅವರ ಹೆಸರು ಉಲ್ಲೇಖಿಸಿತ್ತು.
ತಮ್ಮನ್ನು ವಿಚಾರಣೆಗೆ ಒಳಪಡಿಸುವುದನ್ನು ಶ್ರೀಲಕ್ಷ್ಮಿ ವಿಚಾರಣಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಅರ್ಜಿ ವಜಾ ಆಗಿದ್ದರಿಂದ ಹೈಕೋರ್ಟ್ ಮೊರೆಹೋಗಿದ್ದರು. 2022ರ ನವೆಂಬರ್ನಲ್ಲಿ ಅವರನ್ನು ಪ್ರಕರಣದಿಂದ ಕೈಬಿಡಲಾಗಿತ್ತು.
2023ರ ಮೇನಲ್ಲಿ ಹೈಕೋರ್ಟ್ ಆದೇಶವನ್ನು ಸಿಬಿಐ, ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್ ಆದೇಶ ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್, ಮತ್ತೆ ತೀರ್ಮಾನಿಸುವಂತೆ ಹೈಕೋರ್ಟ್ಗೆ ಸೂಚಿಸಿತ್ತು. ಈ ಮಧ್ಯೆ ಹೈಕೋರ್ಟ್ ತನ್ನ ಆದೇಶವನ್ನು ಪುನರ್ ಪರಿಶೀಲಿಸಿ, ವಿಚಾರಣೆ ನಡೆಸಲು ಸೂಚಿಸಿತ್ತು.
2025ರ ಆಗಸ್ಟ್ 29ರಂದು ಶ್ರೀಲಕ್ಷ್ಮಿ ಅವರ ವಿಚಾರಣೆಗೆ ತಡೆ ನೀಡಿ, ತನಿಖಾ ಸಂಸ್ಥೆ ಸಿಬಿಐಗೆ ನೋಟಿಸ್ ನೀಡಿದ್ದ ಸುಪ್ರೀಂ ಕೋರ್ಟ್ ಇದೀಗ ಶ್ರೀಲಕ್ಷ್ಮಿ ಅವರ ಅರ್ಜಿ ವಜಾ ಮಾಡಿದೆ.
ಆರೋಪ ಏನು?:
ಶ್ರೀಲಕ್ಷ್ಮಿ ಅವರು ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಂಡು ಉದ್ಯಮಿ ಹಾಗೂ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಒಡೆತನದ ಓಬಳಾಪುರಂ ಗಣಿ ಕಂಪನಿ ಪರವಾಗಿ ಕೆಲಸ ಮಾಡಿದ್ದರು. ಗಣಿ ಗುತ್ತಿಗೆ ಸಂದರ್ಭದಲ್ಲಿ ಗಂಭೀರ ಷರತ್ತುಗಳನ್ನು ಕೈಬಿಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದರು ಎಂದು ಸಿಬಿಐ ಹೇಳಿತ್ತು.
ಆರೋಪಿಗಳು ಸರ್ಕಾರವನ್ನು ವಂಚಿಸಲು ಅಧಿಕಾರಿಯ ಕ್ರಮಗಳು ಸಹಕರಿಸಿದ್ದವು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ ಎಂದು ಸಿಬಿಐ ಉಲ್ಲೇಖಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.