ಸಂಬಲ್ಪುರ: ಹಿರಾಕುಡ್ ಜಲಾಶಯ ಪ್ರದೇಶಕ್ಕೆಸಂತಾನೋತ್ಪತ್ತಿ ಮತ್ತು ವಲಸೆಯ ಅವಧಿಯಲ್ಲಿ ಬರುವ ಪಕ್ಷಿಗಳನ್ನು ರಕ್ಷಿಸಲುಗೋವಿಂದಪುರ ಗ್ರಾಮದ ನಿವಾಸಿಗಳು ನಿರತರಾಗಿರುವುದರಿಂದಒಡಿಶಾದ ಈ ಗ್ರಾಮವು ಈಗ ‘ಪಕ್ಷಿಗಳ ಗ್ರಾಮ’ ಎಂದು ಘೋಷಿಸಲ್ಪಟ್ಟಿದೆ.
ಬರ್ಗಡ್ ಜಿಲ್ಲೆಯ ಹಿರಾಕುಡ್ ಸರೋವರದ ಬಳಿ ಇರುವ ಲಖನ್ಪುರ್ ವನ್ಯಜೀವಿ ವ್ಯಾಪ್ತಿಯ ಗ್ರಾಮಸ್ಥರು ಅತಿಥಿ ಹಕ್ಕಿಗಳಿಗಾಗಿ ತಮ್ಮ ಸುತ್ತಲಿನ ಪ್ರದೇಶವನ್ನು ಮಾಲಿನ್ಯಮುಕ್ತವಾಗಿರಿಸುವ ಭರವಸೆ ನೀಡಿದ್ದಾರೆ.ಹಿರಾಕುಡ್ ವನ್ಯಜೀವಿ ವಿಭಾಗದ ಮಾರ್ಗದರ್ಶನದಲ್ಲಿ ಗ್ರಾಮಸ್ಥರು ಈ ಕ್ರಮ ಕೈಗೊಂಡಿದ್ದಾರೆ.
ಗ್ರಾಮಸ್ಥರು ಈ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಅವರಲ್ಲಿ ಪಕ್ಷಿಗಳನ್ನು ರಕ್ಷಿಸಬೇಕೆಂಬ ಅರಿವಿನ ಜತೆಗೆ ತಾವೇ ಆ ಪಕ್ಷಿಗಳ ಮಾಲೀಕರು ಎಂಬ ಭಾವನೆ ಮೂಡಿಸಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಅಭಿಪ್ರಾಯ ಪಡುತ್ತಾರೆ.
‘ಗೋವಿಂದಪುರವಲ್ಲದೇ ಅಕ್ಕಪಕ್ಕದ ಗ್ರಾಮಳಾದ ತಮ್ದೆ ಮತ್ತು ರಾಮ್ಖೋಲ್ ಗ್ರಾಮಸ್ಥರು ಕೂಡಾ ಪಕ್ಷಿಗಳ ಸಂರಕ್ಷಣೆಯಲ್ಲಿ ತೊಡಗಿಕೊಳ್ಳುವುದಾಗಿ ವಾಗ್ದಾನ ಮಾಡಿದ್ದಾರೆ. ಈ ಗ್ರಾಮಗಳಲ್ಲಿರುವ ಮನೆಗಳ ಗೋಡೆಗಳಲ್ಲಿರೆಡ್ಕ್ರೆಸ್ಟೆಡ್ ಪೊಚಾರ್ಡ್, ಮೂರ್ಹೆನ್, ಸ್ಕಿಮ್ಮರ್ನಂತಹ ವರ್ಣರಂಜಿತ ಪಕ್ಷಿಗಳ ವರ್ಣಚಿತ್ರಗಳಿವೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
ಹಿರಾಕುಡ್ ಜಲಾಶಯದ ಪ್ರದೇಶಕ್ಕೆ ಪ್ರತಿವರ್ಷ ಅಕ್ಟೋಬರ್ ವೇಳೆಗೆ ಸುಮಾರು 100 ಜಾತಿಯ 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ವಲಸೆ ಬರುತ್ತವೆ. ಈ ಪಕ್ಷಿಗಳು 6 ತಿಂಗಳುಗಳ ಕಾಲ ಇಲ್ಲಿಯೇ ನೆಲೆಸುತ್ತವೆ. ಆಗಛತ್ತೀಸ್ಗಢ, ಜಾರ್ಖಂಡ್ ಮತ್ತು ಒಡಿಶಾದ ಝಾರ್ಸುಗುಡ, ಬೋಲಂಗೀರ್, ಸೋನೆಪುರ್, ಸಂಬಲ್ಪುರ ಜಿಲ್ಲೆಗಳಿಂದ ಪ್ರವಾಸಿಗರು ಮತ್ತು ಬರ್ಗಡ್ ಜಿಲ್ಲೆಗಳ ಸ್ಥಳೀಯರು ಈ ಮೂರು ಗ್ರಾಮಗಳಿಗೆ ದೋಣಿ ವಿಹಾರ ಮತ್ತು ಪಕ್ಷಿ ವೀಕ್ಷಣೆಗಾಗಿ ಭೇಟಿ ನೀಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.