ಭುವನೇಶ್ವರ: ಮಹಾರಾಷ್ಟ್ರ, ಛತ್ತೀಸಗಡ, ಕೇರಳ, ಪಂಜಾಬ್, ಮಧ್ಯಪ್ರದೇಶ ರಾಜ್ಯಗಳಿಂದ ಬರುವ ಪ್ರಯಾಣಿಕರು ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವೆಂದು ಒಡಿಶಾ ಸರ್ಕಾರ ಸೂಚಿಸಿದೆ.
ʼಮಹಾರಾಷ್ಟ್ರ, ಛತ್ತೀಸಗಡ, ಕೇರಳ, ಪಂಜಾಬ್, ಮಧ್ಯಪ್ರದೇಶ ರಾಜ್ಯಗಳಿಂದ ಬರುವ ಪ್ರಯಾಣಿಕರು ಒಡಿಶಾದ ವಿಮಾನ ನಿಲ್ದಾಣದಲ್ಲಿಯೇ ಪರೀಕ್ಷೆಗೆ ಒಳಗಾಗಲಿದ್ದಾರೆ. ಪಾಸಿಟಿವ್ ವರದಿ ಬಂದವರು ಪ್ರತ್ಯೇಕವಾಸದಲ್ಲಿದ್ದು, ಚಿಕಿತ್ಸೆ ಪಡೆಯಲಿದ್ದಾರೆʼ ಎಂದು ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್-19 ನಿರ್ವಹಣೆ ಹಾಗೂ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಬೆಂಬಲಿಸುವ ಸಲುವಾಗಿ ಉನ್ನತ ಮಟ್ಟದ ಶಿಸ್ತುಪಾಲನಾ ತಂಡಗಳನ್ನುಮಹಾರಾಷ್ಟ್ರ, ಕೇರಳ, ಚತ್ತೀಸಗಢ, ಮಧ್ಯಪ್ರದೇಶ, ಗುಜರಾತ್, ಪಂಜಾಬ್, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಜಮ್ಮು ಕಾಶ್ಮೀರಕ್ಕೆ ನಿಯೋಜಿಸಿದೆ.
ಅಧಿಕೃತ ಮೂಲಗಳ ಪ್ರಕಾರ, ಮೂವರು ಸದಸ್ಯರಿರುವ ಶಿಸ್ತುಪಾಲನಾ ತಂಡಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿವೆ. ಇತ್ತೀಚೆಗೆ ಸೋಂಕು ಪ್ರಕರಣಗಳು ಏರುತ್ತಿರುವುದಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಅಧ್ಯಯನ ನಡೆಸಲಿವೆ. ಸೋಂಕು ಪ್ರಕರಣಗಳು ಹೆಚ್ಚಾಗದಂತೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಿವೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.