ನವದೆಹಲಿ: ವಿದೇಶಗಳಿಂದ ಬಂದ ನಾಲ್ವರು ಪ್ರಯಾಣಿಕರನ್ನು ದೆಹಲಿಯ ಲೋಕ ನಾಯಕ್ ಜಯಪ್ರಕಾಶ್ ನಾರಾಯಣ್ (ಎಲ್ಎನ್ಜೆಪಿ) ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಗೆ ಕೊರೊನಾ ವೈರಸ್ನ ರೂಪಾಂತರ ತಳಿ ಓಮೈಕ್ರಾನ್ ತಗುಲಿರುವ ಶಂಕೆ ವ್ಯಕ್ತವಾಗಿದೆ.
ಪ್ರಯಾಣಿಕರನ್ನು ಓಮೈಕ್ರಾನ್ ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಶೇಷ ಐಸೋಲೇಷನ್ ವಾರ್ಡ್ಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸದ್ಯ ವಿಶೇಷ ವಾರ್ಡ್ನಲ್ಲಿ ಒಟ್ಟು 30 ಮಂದಿ ಇದ್ದು, 25 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಐವರಲ್ಲಿ ಸೋಂಕಿನ ಶಂಕೆ ಇದೆ. ಇವತ್ತು ದಾಖಲಾಗಿರುವ ನಾಲ್ವರೂ ಭಾರತೀಯರು’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಭಾನುವಾರ ಮೊದಲ ಓಮೈಕ್ರಾನ್ ಪ್ರಕರಣ ದೃಢಪಟ್ಟಿತ್ತು. ಸೋಂಕಿತ ವ್ಯಕ್ತಿ ಪೂರ್ತಿಯಾಗಿ ಲಸಿಕೆ ಪಡೆದಿದ್ದು, ತಾಂಜಾನಿಯಾದಿಂದ ಬಂದಿದ್ದರು. ಇವರು ರಾಂಚಿಯವರಾಗಿದ್ದು, ತಾಂಜಾನಿಯಾದಿಂದ ದೋಹಾಗೆ ಪ್ರಯಾಣಿಸಿ ಬಳಿಕ ದೆಹಲಿಗೆ ಬಂದಿದ್ದರು. ಈ ಮಧ್ಯೆ ಅವರು ದಕ್ಷಿಣ ಆಫ್ರಿಕಾದ ಜೊಹಾನ್ಸ್ಬರ್ಗ್ನಲ್ಲಿ ಒಂದು ವಾರ ತಂಗಿದ್ದರು. ಅವರಲ್ಲಿ ಸೌಮ್ಯವಾದ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.