ADVERTISEMENT

ನಿಗೂಢ ಕಾಯಿಲೆಗೆ ಆಂಧ್ರದಲ್ಲಿ ಒಬ್ಬನ ಸಾವು, 292 ಮಂದಿ ಅಸ್ವಸ್ಥ

ಏಜೆನ್ಸೀಸ್
Published 6 ಡಿಸೆಂಬರ್ 2020, 21:33 IST
Last Updated 6 ಡಿಸೆಂಬರ್ 2020, 21:33 IST
ಅಪಸ್ಮಾರದ ಲಕ್ಷಣ ಪತ್ತೆಯಾದ ಮಹಿಳೆಯನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಪಸ್ಮಾರದ ಲಕ್ಷಣ ಪತ್ತೆಯಾದ ಮಹಿಳೆಯನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.   

ಅಮರಾವತಿ, ಆಂಧ್ರಪ್ರದೇಶ: ಇಲ್ಲಿನ ಏಳೂರಿನಲ್ಲಿ ಹರಡಿರುವ ನಿಗೂಢ ಕಾಯಿಲೆಗೆ ವ್ಯಕ್ತಿಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ.

‘292 ಮಂದಿ ಅಸ್ವಸ್ಥರಾಗಿದ್ದು, ಈ ಪೈಕಿ 140ಕ್ಕೂ ಅಧಿಕ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗಳಿಗೆ ಮರಳಿದ್ದಾರೆ. ಉಳಿದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ಪಶ್ಚಿಮ ಗೋದಾವರಿ ಜಿಲ್ಲೆಯ ಆರೋಗ್ಯ ಮತ್ತು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.

‘ಜನರಲ್ಲಿ ಏಕಾಏಕಿ ವಾಕರಿಕೆ ಮತ್ತು ಫಿಟ್ಸ್‌ ಲಕ್ಷಣಗಳು ಗೋಚರಿಸಿದ್ದು, ಹಲವರು ಪ್ರಜ್ಞೆ ಕಳೆದುಕೊಂಡಿದ್ದರು. ಇದಕ್ಕೆ ಕಾರಣವೇನು, ಇದು ಯಾವ ಬಗೆಯ ಕಾಯಿಲೆ ಎಂಬುದು ಇನ್ನೂ ಗೊತ್ತಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಲ್ಲಿ ವಾಕರಿಕೆ ಮತ್ತು ಅತಿಸಾರದ ಲಕ್ಷಣ ಕಾಣಿಸಿಕೊಂಡಿದ್ದರಿಂದ ಅವರನ್ನು ವಿಜಯವಾಡದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ಕೊನೆಯುಸಿರೆಳೆದಿದ್ದಾರೆ.

ರೋಗ ಲಕ್ಷಣ ಕಾಣಿಸಿಕೊಂಡವರ ಪೈಕಿ ಬಹುತೇಕರು ಕೆಲವೇ ನಿಮಿಷಗಳಲ್ಲಿ ಚೇತರಿಸಿಕೊಂಡಿದ್ದಾರೆ. ಕೆಲವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷ ವೈದ್ಯರ ತಂಡವು ಏಳೂರಿಗೆ ಧಾವಿಸಿ ಚಿಕಿತ್ಸಾ ಕಾರ್ಯದಲ್ಲಿ ನಿರತವಾಗಿದೆ. ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರು ಸೋಮವಾರ ಏಳೂರಿಗೆ ಭೇಟಿ ನೀಡಲಿದ್ದು ಆಸ್ಪ‍ತ್ರೆಯಲ್ಲಿರುವ ರೋಗಿಗಳ ಯೋಗಕ್ಷೇಮ ವಿಚಾರಿಸಲಿದ್ದಾರೆ. ಬಳಿಕ ಪಶ್ಚಿಮ ಗೋಧಾವರಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.