ನವದೆಹಲಿ: ಕರ್ನಾಟಕದಲ್ಲಿರುವ 1.28 ಕೋಟಿ ಹೆಕ್ಟೇರ್ ಕೃಷಿ ಭೂಮಿಯ ಪೈಕಿ 40.32 ಲಕ್ಷ ಹೆಕ್ಟೇರ್ನಲ್ಲಿ ಮಾತ್ರ ನೀರಾವರಿ ವ್ಯವಸ್ಥೆ ಇದೆ ಎಂದು ಶುಕ್ರವಾರ ರಾಜ್ಯಸಭೆಗೆ ತಿಳಿಸಲಾಗಿದೆ.
ಬಿಜೆಪಿಯ ಕೆ.ಸಿ.ರಾಮಮೂರ್ತಿ ಅವರಿಗೆ ಲಿಖಿತ ಉತ್ತರ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ದೇಶದಲ್ಲಿರುವ 18.09 ಕೋಟಿ ಹೆಕ್ಟೇರ್ ಕೃಷಿ ಭೂಮಿಯ ಪೈಕಿ 7.15 ಕೋಟಿ ಹೆಕ್ಟೇರ್ಗೆ ಮಾತ್ರ ನೀರಾವರಿ ಸೌಲಭ್ಯ ಇದೆ ಎಂದು ಹೇಳಿದ್ದಾರೆ.
ಕೃಷಿ ರಾಜ್ಯ ಪಟ್ಟಿಯಲ್ಲಿರುವುದರಿಂದ ನೀರಾವರಿ ಮತ್ತು ಜಲಸಂಪನ್ಮೂಲಕ್ಕೆ ಸಂಬಂಧಿಸಿದ ಕೆಲಸಗಳನ್ನು ರಾಜ್ಯ ಸರ್ಕಾರಗಳೇ ತಮ್ಮ ಸಂಪನ್ಮೂಲ ಬಳಸಿ ಮಾಡುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.
ಜಲಸಂಪನ್ಮೂಲಗಳ ದಕ್ಷ ನಿರ್ವಹಣೆಗಾಗಿ ಕೇಂದ್ರವು ತಾಂತ್ರಿಕ ಮತ್ತು ಹಣಕಾಸಿನ ನೆರವು ನೀಡುತ್ತಿದೆ. ಪ್ರಧಾನಮಂತ್ರಿ ಕೃಷಿ ಸಂಚಾಯಿ ಯೋಜನೆ (ಪಿಎಂಕೆಎಸ್ವೈ) ಇಂತಹ ಯೋಜನೆಗಳಲ್ಲಿ ಒಂದು. ಕರ್ನಾಟಕಕ್ಕೆ ಈ ಯೋಜನೆ ಅಡಿಯಲ್ಲಿ 2015–16 ಮತ್ತು 2020–21ರ ನಡುವೆ ₹ 2,000.15 ಕೋಟಿ ಬಿಡುಗಡೆ ಮಾಡಲಾಗಿದೆ. 2021–22ರಲ್ಲಿ ₹ 300 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.