ಚಂದ್ರಬಾಬು ನಾಯ್ಡು
– ಪಿಟಿಐ
ತಿರುಪತಿ: ‘ವ್ಯಕ್ತಿಯೊಬ್ಬ ಸರಪಂಚ, ಪುರಸಭಾ ಸದಸ್ಯ ಅಥವಾ ಮೇಯರ್ ಆಗಲು ಎರಡು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಬೇಕು. ಜನಸಂಖ್ಯೆ ಹೆಚ್ಚಳ ಮಾಡುವ ಉದ್ದೇಶದಿಂದ ಇಂತಹ ಕಾಯ್ದೆಯನ್ನು ರಾಜ್ಯದಲ್ಲಿ ತರಲಿದ್ದೇನೆ’ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು.
‘ಒಂದು ಕಾಲದಲ್ಲಿ ಹೆಚ್ಚು ಮಕ್ಕಳಿದ್ದವರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರಲಿಲ್ಲ. ಈಗ ನಾನು ಇದಕ್ಕೆ ತದ್ವಿರುದ್ಧವಾದ ವಿಷಯವನ್ನು ಹೇಳುತ್ತಿದ್ದೇನೆ’ ಎಂದು ನಾರಾವಾರಿಪಲ್ಲೆಯಲ್ಲಿ ಈಚೆಗೆ ಸುದ್ದಿಗಾರರಿಗೆ ತಿಳಿಸಿದರು.
ಜನಸಂಖ್ಯೆ ಹೆಚ್ಚಿಸಬೇಕೆಂಬ ತಮ್ಮ ಪ್ರತಿಪಾದನೆಗೆ ನಾಯ್ಡು ಅವರು ನೀಡಿದ ಸಮರ್ಥನೆಗಳಿವು:
ಹಿಂದೆಲ್ಲ ನಾಲ್ಕೈದು ಮಕ್ಕಳನ್ನು ತಂದೆ–ತಾಯಿ ಪಡೆಯುತ್ತಿದ್ದರು. ಈಗಿನವರು ಒಂದಕ್ಕೆ ಸಾಕೆನ್ನುತ್ತಾರೆ. ಇನ್ನು ಕೆಲವರು ತಮ್ಮಷ್ಟಕ್ಕೆ ಖುಷಿಯಾಗಿ ಇರಲೆಂದು ಮಕ್ಕಳೇ ಬೇಡವೆನ್ನುತ್ತಿದ್ದಾರೆ. ಇದು ಸರಿಯಲ್ಲ.
ಒಂದೇ ಮಗು ಸಾಕು ಎಂದರೆ 2047ರ ಹೊತ್ತಿಗೆ ವೃದ್ಧರ ಸಂಖ್ಯೆಯೇ ಹೆಚ್ಚಾಗಿ ಯುವಕರ ಸಂಖ್ಯೆ ಕಡಿಮೆಯಾಗುತ್ತದೆ.
ದಕ್ಪಿಣ ಕೊರಿಯಾ, ಜಪಾನ್ ಕೂಡ ಮಕ್ಕಳು ಬೇಡ ಎಂದು ತೀರ್ಮಾನ ತೆಗೆದುಕೊಂಡು, ಸಂಪತ್ತಿನ ಕ್ರೋಡೀಕರಣಕ್ಕೆ ಮುಂದಾಗಿದ್ದವು. ಈಗ ಅಲ್ಲಿ ಜನಸಂಖ್ಯೆ ಇಲ್ಲದಿರುವುದೇ ಸಮಸ್ಯೆಯಾಗಿದೆ. ಮಾನವ ಸಂಪನ್ಮೂಲವನ್ನು ಅಲ್ಲಿಗೆ ನಾವು ಕಳುಹಿಸಬೇಕಾಗಿದೆ. ಯುರೋಪ್ನ ಕೆಲವೆಡೆಯೂ ಇದೇ ಸಮಸ್ಯೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.