ADVERTISEMENT

ಮುಂಗಾರು ಅಧಿವೇಶನ: ‘ಆಪರೇಷನ್‌ ಸಿಂಧೂರ’ ಕುರಿತು ಚರ್ಚೆ ನಡೆಯುವ ಸಾಧ್ಯತೆ

ಪಿಟಿಐ
Published 27 ಜುಲೈ 2025, 14:08 IST
Last Updated 27 ಜುಲೈ 2025, 14:08 IST
ಸಂಸತ್‌ ಭವನ
ಸಂಸತ್‌ ಭವನ   

ನವದೆಹಲಿ: ‌ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಪುನರಾರಂಭ ಆಗಲಿದ್ದು, ಲೋಕಸಭೆಯಲ್ಲಿ ‘ಆಪರೇಷನ್‌ ಸಿಂಧೂರ’ ಕುರಿತು ಕಾವೇರಿದ ಚರ್ಚೆ ನಡೆಯುವ ಸಾಧ್ಯತೆಯಿದೆ.

ಕೆಲ ವಿರೋಧ ಪಕ್ಷಗಳು ಬಿಹಾರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತೂ ಧ್ವನಿಯೆತ್ತುವ ನಿರೀಕ್ಷೆಗಳಿವೆ. 

ರಾಜ್ಯಸಭೆಯಲ್ಲಿ ‘ಆಪರೇಷನ್‌ ಸಿಂಧೂರ’ ಕುರಿತ ಮಂಗಳವಾರ ಚರ್ಚೆಗೆ 16 ಗಂಟೆಗಳ ಕಾಲವನ್ನು ಮೀಸಲಿಡಲಾಗಿದೆ. ಎರಡೂ ಸದನಗಳಲ್ಲಿ ಈ ವಿಷಯ ಕುರಿತು ಚರ್ಚಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿರೋಧ ಪಕ್ಷಗಳು ತಮ್ಮ ಹಿರಿಯ ನಾಯಕರನ್ನು ಹೆಸರಿಸಿವೆ. 

ADVERTISEMENT

ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಭಯೋತ್ಪಾದನೆ ಮತ್ತು ‘ಆಪರೇಷನ್‌ ಸಿಂಧೂರ’ದ ಕುರಿತು ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲಿದ್ದಾರೆ. ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೂ ಮಧ್ಯ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ತೃಣಮೂಲ ಕಾಂಗ್ರೆಸ್‌ನ ಅಭಿಷೇಕ್‌ ಬ್ಯಾನರ್ಜಿ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಸರ್ಕಾರವನ್ನು ಕಟ್ಟಿಹಾಕಲು ಪ್ರಯತ್ನಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸರ್ವ ಪ್ರಯತ್ನ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ. 

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು, ಮೊದಲಿಗೆ, ‘ಆಪರೇಷನ್‌ ಸಿಂಧೂರ’ ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ವಿವರಿಸಲಿದ್ದಾರೆ. ಭಾರತ– ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ, ಕದನ ವಿರಾಮ ಮತ್ತು ಸಂಘರ್ಷ ಶಮನಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಹಿಸಿದ ಪಾತ್ರದ ಕುರಿತು ಸದನದಲ್ಲಿ ಹೇಳುವ ಸಾಧ್ಯತೆಗಳಿವೆ.

ಸೇನಾ ಸಂಘರ್ಷದಲ್ಲಿ ಭಾರತ ಕಳೆದುಕೊಂಡ ಯುದ್ಧ ವಿಮಾನಗಳ ವಿವರಗಳನ್ನು ರಕ್ಷಣಾ ಸಚಿವರು ನೀಡುತ್ತಾರೆಯೇ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.  

ಸದನದಲ್ಲಿ ಚರ್ಚೆಯ ವೇಳೆ ತನ್ನ ಕಾರ್ಯತಂತ್ರ ಹೇಗಿರಬೇಕು ಎಂಬುದನ್ನು ಅಂತಿಮಗೊಳಿಸಲು ವಿರೋಧ ಪಕ್ಷಗಳ ‘ಇಂಡಿಯಾ’ ಕೂಟವು ಸೋಮವಾರ ಬೆಳಿಗ್ಗೆ ಕೂಟದ ನಾಯಕರ ಸಭೆ ನಡೆಸಲಿದೆ ಎಂದು ಮೂಲಗಳು ಹೇಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.