ಯೋಗಿ ಆದಿತ್ಯನಾಥ
ಆಗ್ರಾ: 'ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆ ಪಾಕಿಸ್ತಾನದ ಮೇಲೆ ನಡೆಸಿರುವ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯು ಮರಾಠಾ ಸಾಮ್ರಾಜ್ಯದ ರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಪ್ರತಿಪಾದಿಸಿರುವ ಆತ್ಮರಕ್ಷಣೆಯ ತತ್ವಗಳಿಂದ ಪ್ರೇರಿತವಾಗಿದೆ' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಂದು (ಭಾನುವಾರ) ತಿಳಿಸಿದ್ದಾರೆ.
'ಅದೇ ರೀತಿ, ಬಿಜೆಪಿ ನೇತೃತ್ವದ 'ಡಬಲ್-ಎಂಜಿನ್' ಸರ್ಕಾರವು ಅಹಲ್ಯಾಬಾಯಿ ತೋರಿಸಿದ್ದ ಉತ್ತಮ ಆಡಳಿತದ ಮಾರ್ಗವನ್ನು ಅನುಸರಿಸುತ್ತಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಹಾಗೂ ಸಾಮಾಜಿಕ ಕಲ್ಯಾಣ ನಿರ್ವಹಿಸುತ್ತಿದೆ' ಎಂದು ಹೇಳಿದ್ದಾರೆ.
18ನೇ ಶತಮಾನದಲ್ಲಿ ಮಾಲ್ವಾ ಪ್ರದೇಶವನ್ನು ಆಳಿದ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜಯಂತ್ಯುತ್ಸವ ಅಂಗವಾಗಿ ಮಾತನಾಡಿದ ಆದಿತ್ಯನಾಥ, 'ಇಂದು ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತದೆ. ಸಶಸ್ತ್ರ ಪಡೆಗಳು ವೈಮಾನಿಕ ದಾಳಿ ನಡೆಸುತ್ತದೆ. ಪಹಲ್ಗಾಮ್ ದಾಳಿಯ ನಂತರ ಭಯೋತ್ಪಾದಕರನ್ನು ಪೋಷಿಸುವ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಭಾರತ ಪ್ರತೀಕಾರವನ್ನು ತೀರಿಸಿಕೊಂಡಿತು' ಎಂದು ಹೇಳಿದ್ದಾರೆ.
'ಪ್ರಧಾನಿ ಮೋದಿ ನಾಯಕತ್ವದಲ್ಲಿ ಧೈರ್ಯಶಾಲಿ ಭಾರತೀಯ ಯೋಧರು 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿ ಶತ್ರುಗಳು ತಲೆಬಾಗುವಂತೆ ಮಾಡಿತು. ಇದು 300 ವರ್ಷಗಳ ಹಿಂದೆ ಅಹಲ್ಯಾಬಾಯಿ ಅವರ ಆಳ್ವಿಕೆಯಲ್ಲಿ ಪ್ರತಿಪಾದಿಸಿದ ಆತ್ಮರಕ್ಷಣೆಯ ತತ್ವಗಳಿಂದ ಪ್ರೇರಿತವಾಗಿತ್ತು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.