ADVERTISEMENT

‘ಜುಮ್ಲಾಜೀವಿ’ ಸೇರಿದಂತೆ ಕೆಲ ಪದ ಸಂಸತ್‌ನಲ್ಲಿನ್ನು ಅಸಂಸದೀಯ: ವಿಪಕ್ಷಗಳ ಆಕ್ಷೇಪ

ಪಿಟಿಐ
Published 14 ಜುಲೈ 2022, 10:49 IST
Last Updated 14 ಜುಲೈ 2022, 10:49 IST
ಸಂಸತ್‌ ಕಲಾಪ
ಸಂಸತ್‌ ಕಲಾಪ    

ನವದೆಹಲಿ: ಸಂಸತ್ತಿನಲ್ಲಿ ಕೆಲವು ಪದಗಳ ಬಳಕೆಗೆ ಹೇರಲಾಗಿರುವ ನಿರ್ಬಂಧವನ್ನು ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಗುರುವಾರ ಆಕ್ರೋಶ ವ್ಯಕ್ತಪಡಿಸಿವೆ. ಮೋದಿ ಆಡಳಿತವನ್ನು ವಿವರಿಸಲು ಪ್ರತಿಪಕ್ಷಗಳು ಬಳಸುವ ಎಲ್ಲಾ ಪದಗಳನ್ನು ಈಗ ‘ಅಸಂಸದೀಯ‘ ಎಂದು ಪರಿಗಣಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ

‘ಜುಮ್ಲಾಜೀವಿ’, 'ಬಾಲ ಬುದ್ಧಿ', 'ಕೋವಿಡ್ ಸ್ಪ್ರೆಡ್ಡರ್‌ (ಕೋವಿಡ್‌ ನಿರ್ವಹಣೆ ಸಂಬಂಧಿಸಿದ ಟೀಕೆ)' ಮತ್ತು 'ಸ್ನೂಪ್‌ಗೇಟ್ (ಪೆಗಾಸಿಸ್‌ ಹಗರಣ)' ‘ಅಶ್ಶೇಮ್ಡ್‌ (ನಾಚಿಕೆಗೇಡು)', 'ಅಬ್ಯೂಸ್ಡ್‌– (ದುರುಪಯೋಗ, ನಿಂದನೆ), 'ಬೆಟ್ರಾಯ್ಡ್‌ (ದ್ರೋಹ)', ಕರಪ್ಟ್‌ (ಭ್ರಷ್ಟ)', 'ಡ್ರಾಮ (ನಾಟಕ)', 'ಹಿಪೊಕ್ರಸಿ (ಬೂಟಾಟಿಕೆ)' ಮತ್ತು 'ಇನ್‌ಕಾಂಪೆಟೆಂಟ್‌ (ಅಸಮರ್ಥ)' ಸೇರಿದಂತೆ ಕಲವು ಪದಗಳನ್ನು ಲೋಕಸಭೆ ಮತ್ತು ರಾಜ್ಯಸಭೆಗಳೆಡರಲ್ಲೂ ಅಸಂಸದೀಯ ಎಂದು ಪರಿಗಣಿಸಲಾಗುವುದು ಎಂದು ಸರ್ಕಾರ ಹೊರಡಿಸಿರುವ ಹೊಸ ಕಿರುಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಈ ಕ್ರಮವನ್ನು ಟೀಕಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಮೋದಿ ಸರ್ಕಾರದ ವಾಸ್ತವವನ್ನು ವಿವರಿಸಲು ಪ್ರತಿಪಕ್ಷಗಳು ಬಳಸುವ ಎಲ್ಲಾ ಪದಗಳನ್ನು ಈಗ ಅಸಂಸದೀಯ ಎಂದು ಪರಿಗಣಿಸಲಾಗುತ್ತಿದೆ. ಮುಂದೆ ಏನು ವಿಶ್ವಗುರು?’ ಎಂದು ಪ್ರಶ್ನೆ ಮಾಡಿದ್ದಾರೆ.

ADVERTISEMENT

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಕೂಡ ‘ಸಾಹೇಬರಿಗೆ ಅವರ ಗುಣಗಳ ಬಗ್ಗೆ ಚೆನ್ನಾಗಿ ಅರಿವಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಜುಮ್ಲಾಜೀವಿ'ಗೆ ಯಾರು ಹೆದರುತ್ತಾರೆ - ಜುಮ್ಲಾಗಳನ್ನು ನೀಡಿದವರು. ಯಾರು ‘ಜೈಚಂದ್’ ಎಂಬ ಪದಕ್ಕೆ ಹೆದರುತ್ತಾರೆ - ದೇಶಕ್ಕೆ ದ್ರೋಹ ಬಗೆದವರು. ಈ ಪದಗಳನ್ನು ಸಂಸತ್ತಿನಲ್ಲಿ ನಿಷೇಧಿಸಲಾಗುತ್ತಿದೆ. ಆದರೆ, ಪ್ರಧಾನಿ ಮೋದಿಯವರ ಭಯ ಹೊರಬರುತ್ತಿದೆ’ ಎಂದು ಹೇಳಿದೆ.

ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರೇನ್ ಈ ಬಗ್ಗೆ ಟ್ವೀಟ್‌ ಮಾಡಿದ್ದು, ‘ನಾಚಿಕೆಗೇಡು, ದುರ್ಬಳಕೆ, ನಿಂದಿಸು, ದ್ರೋಹ, ಬೂಟಾಟಿಕೆ, ಭ್ರಷ್ಟ...’ ಇನ್ನುಮುಂದೆ ಸಂಸತ್ತಿನಲ್ಲಿ ಭಾಷಣ ಮಾಡುವಾಗ ನಾವು ಈ ಮೂಲಭೂತ ಪದಗಳನ್ನು ಬಳಸುವಂತಿಲ್ಲ. ಆದರೆ, ನಾನು ಇದನ್ನು ಸಂಸತ್‌ನಲ್ಲಿ ಬಳಸುತ್ತೇನೆ. ಸಾಧ್ಯವಾದರೆ ನನ್ನನ್ನು ಅಮಾನತು ಮಾಡಿ. ಪ್ರಜಾಪ್ರಭುತ್ವದ ಉಳಿವಿಗಾಗಿ ನಾನು ಹೋರಾಡುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.