ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್ ವಿಂಗಡಣ ಆಯೋಗದ ಅಂತಿಮ ವರದಿಯನ್ನು ಆಲ್ ಪಾರ್ಟೀಸ್ ಯುನೈಟೆಡ್ ಮೋರ್ಚಾವು (ಎಪಿಯುಎಂ) ತಿರಸ್ಕರಿಸಿದೆ.
ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಸಿಪಿಐ(ಎಂ), ಸಿಪಿಐ ಸೇರಿ ಇತರೆ ಪಕ್ಷಗಳನ್ನು ಒಳಗೊಂಡ ಎಪಿಯುಎಂ ಶನಿವಾರ ಈ ಕುರಿತು ಹೇಳಿಕೆ ನೀಡಿದ್ದು, ‘ಆಯೋಗದ ವರದಿಯು ಅತ್ಯಂತ ಆಕ್ಷೇಪಾರ್ಹ, ಪಕ್ಷಪಾತ ಹಾಗೂ ರಾಜಕೀಯ ಪ್ರೇರಿತವಾಗಿದೆ’ ಎಂದು ಆರೋಪಿಸಿದೆ. ಅಲ್ಲದೇ ಈ ಸಂಬಂಧ ಚರ್ಚಿಸಲು ಮೇ 9ರಂದು ತುರ್ತು ಸಭೆ ಕರೆದಿದೆ.
ಆಯೋಗವು ಜಮ್ಮು–ಕಾಶ್ಮೀರದ ವಾಸ್ತವ ಸಂಗತಿ, ವಿವಿಧ ಪ್ರದೇಶಗಳ ಜನರ ಅನುಕೂಲತೆ ಮತ್ತು ಆಕಾಂಕ್ಷೆಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ಎಪಿಯುಎಂ, ವರದಿಯ ವಿರುದ್ದ ಧ್ವನಿ ಎತ್ತಲು ಸಮಾನ ಮನಸ್ಕ ಪಕ್ಷಗಳು ಹಾಗೂ ಸಂಘಟನೆಗಳು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ರಾಜಕೀಯ ಮೀಸಲಾತಿಯನ್ನು ಪಡೆದ ಗುಜ್ಜರ್ ಹಾಗೂ ಬಕರ್ವಾಲ್ ಸಮುದಾಯದ ಸಂಘಟನೆಗಳು ಆಯೋಗದ ವರದಿಯನ್ನು ಸ್ವಾಗತಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.