ADVERTISEMENT

ಕಲಾಪಕ್ಕೆ ಅಡ್ಡಿ ಕಾರ್ಯತಂತ್ರ: ಪ್ರತಿಪಕ್ಷಗಳ ವಿರುದ್ಧ ಮೋದಿ ಕಿಡಿ

ಪಿಟಿಐ
Published 10 ಫೆಬ್ರುವರಿ 2021, 18:23 IST
Last Updated 10 ಫೆಬ್ರುವರಿ 2021, 18:23 IST
   

ನವದೆಹಲಿ: ‘ರೈತ ಹೋರಾಟವನ್ನು ಮುಂದಿಟ್ಟುಕೊಂಡು ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುತ್ತಿರುವವರು ಒಂದು ವ್ಯವಸ್ಥಿತ ಕಾರ್ಯತಂತ್ರದ ಭಾಗವಾಗಿ ಅದನ್ನು ಮಾಡುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಆರೋಪಿಸಿದರು.

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಚರ್ಚೆಯಲ್ಲಿ ಮಾತನಾಡಿದ ಅವರು, ‘ಹೊಸ ಕೃಷಿ ಕಾಯ್ದೆಗಳು ಜಾರಿಯಾದರೆ, ಹಳೆಯ ಕೃಷಿ ಮಾರುಕಟ್ಟೆ ವ್ಯವಸ್ಥೆ ರದ್ದಾಗುವು ದಿಲ್ಲ. ಹಳೆಯ ವ್ಯವಸ್ಥೆಯಲ್ಲೇ ಮುಂದುವರಿಯಲು ಇಚ್ಛಿಸುವವರು ಅದನ್ನು ಮುಂದುವರಿಸಬಹುದು’ ಎಂದರು.

ಕಾಯ್ದೆಗಳ ಬಗ್ಗೆ ಸರ್ಕಾರದ ನಿಲುವನ್ನು ಪ್ರಧಾನಿ ಸ್ಪಷ್ಟಪಡಿಸುತ್ತಿದ್ದಂತೆಯೇ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ನಡೆಸಿದ್ದರು. ತಮ್ಮ ಭಾಷಣದ ವೇಳೆ ಕಾಂಗ್ರೆಸ್‌ ಅನ್ನೇ ಗುರಿಯಾಗಿಟ್ಟು ಮಾತನಾಡಿದ ಮೋದಿ, ‘ಕಾಂಗ್ರೆಸ್‌ ವಿಭಜಿತ ಮತ್ತು ಗೊಂದಲಕ್ಕೆ ಒಳಗಾಗಿರುವ ಪಕ್ಷ. ಕಾಯ್ದೆಗಳ ವಿಚಾರವಾಗಿ ರಾಜ್ಯಸಭೆಯಲ್ಲಿ ಒಂದು ನಿಲುವು, ಲೋಕಸಭೆಯಲ್ಲಿ ಇನ್ನೊಂದು ನಿಲುವನ್ನು ತಳೆದಿದೆ ಎಂದು ಹೇಳಿದರು.

ADVERTISEMENT

‘ಕೃಷಿ ಕಾಯ್ದೆಗಳ ಪ್ರತಿಯೊಂದು ಅಂಶದ ಬಗ್ಗೆ ಚರ್ಚೆಗೆ ಮತ್ತು ಯಾವುದಾದರೂ ಕೊರತೆಗಳಿದ್ದರೆ ಅದನ್ನು ಸರಿಪಡಿಸಲು ಸರ್ಕಾರ ಸಿದ್ಧವಿದೆ. ಕಾಯ್ದೆಗಳ ವಿರುದ್ಧ ಧ್ವನಿ ಎತ್ತುತ್ತಿರುವ ರೈತರ ಬಗ್ಗೆ ನಮ್ಮೆಲ್ಲರಿಗೂ ಗೌರವವಿದೆ. ಆದರೆ ‘ಆಂದೋಲನ ಜೀವಿ’ಗಳು ಚಳವಳಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಮೋದಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.