ಎಂಜಿನಿಯರ್ ರಶೀದ್ (ಪಿಟಿಐ)
ನವದೆಹಲಿ: ಎರಡು ದಿನಗಳ ಕಸ್ಟಡಿ ಪೆರೋಲ್ ಮೇಲೆ ಹೊರಬಂದಿರುವ ಸಂಸದ ಎಂಜಿನಿಯರ್ ರಶೀದ್(ಶೇಕ್ ಅಬ್ದುಲ್ ರಶೀದ್), ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಸಂಸತ್ನಲ್ಲಿ ಒತ್ತಾಯಿಸಿದರು.
ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ನಮ್ಮ ರಕ್ತ ಅಗ್ಗವಾಗಿಲ್ಲ’ ಎಂದರು.
‘ಇತ್ತೀಚೆಗೆ ವಾಸಿಂ ಅಹಮ್ಮದ್ ಮಿರ್ ಮತ್ತು ಕಖಾನ್ ದಿನ್ ಎಂಬ ವ್ಯಕ್ತಿಗಳಿಬ್ಬರು ಭದ್ರತಾ ಪಡೆಗಳಿಂದ ಹತರಾಗಿರುವ ಆರೋಪವಿದೆ. ಇದರ ಬಗ್ಗೆ ತನಿಖೆ ನಡೆಸಬೇಕು’ ಎಂದು ಹೇಳಿದರು.
ಇದೇ ವೇಳೆ ಸುಮಾರು ಆರು ತಿಂಗಳಿಂದ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಂಡಿರುವ ಕುಪ್ವಾರದ ದೂರದ ಪ್ರದೇಶಗಳಿಗೆ ಸುರಂಗ ಮಾರ್ಗ ನಿರ್ಮಿಸುವಂತೆಯೂ ಆಗ್ರಹಿಸಿದರು.
ಬಾರಾಮುಲ್ಲಾ ಕ್ಷೇತ್ರದ ಸಂಸದರಾಗಿರುವ ರಶೀದ್ ಅವರು, ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ 2019ರಿಂದ ತಿಹಾರ್ ಜೈಲಿನಲ್ಲಿದ್ದಾರೆ. ಫೆ.11 ಮತ್ತು 13ರಂದು ಅಧಿವೇಶನದಲ್ಲಿ ಭಾಗವಹಿಸಲು ಅನುಮತಿ ನೀಡಿ ಸೋಮವಾರ ದೆಹಲಿ ಹೈಕೋರ್ಟ್ ಅವರಿಗೆ ಕಸ್ಟಡಿ ಪೆರೋಲ್ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.