ADVERTISEMENT

ಕೈಲಾಸ ಮಾನಸ ಸರೋವರ: ನೇಪಾಳ, ಟಿಬೆಟ್‌ ಭಾಗದಲ್ಲಿ 1500 ಯಾತ್ರಿಕರು

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 6:56 IST
Last Updated 3 ಜುಲೈ 2018, 6:56 IST
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ಮರಾಜ್‌
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ಮರಾಜ್‌   

ಬೆಂಗಳೂರು: ನೇಪಾಳ ಸರ್ಕಾರದ ಸಹಕಾರದೊಂದಿಗೆ ಭಾರತದ ರಾಯಭಾರ ಕಚೇರಿ ಮಾನಸ ಸರೋವರ ಯಾತ್ರಿಕರ ರಕ್ಷಣೆಗೆ ಅಗತ್ಯವಾಗಿರುವ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಟ್ವೀಟಿಸಿದ್ದಾರೆ.

ಕರ್ನಾಟಕದ ಸುಮಾರು 290 ಯಾತ್ರಾರ್ಥಿಗಳು ನೇಪಾಳದ ಸಿಮಿಕೋಟ್‌ನಲ್ಲಿ ಕಳೆದ ನಾಲ್ಕು ದಿನಗಳಿಂದ ಸಿಲುಕಿದ್ದಾರೆ. ವಿಪರೀತ ಮಳೆಯಿಂದ ಸಂಚಾರಿ ಮಾರ್ಗ ಬಹುತೇಕ ಸ್ಥಗಿತಗೊಂಡಿದೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌, ವಿಮಾನಗಳ ಮೂಲಕ ನಡೆಸಬಹುದಾದ ಕಾರ್ಯಾಚರಣೆಗೂ ಅಡ್ಡಿಯುಂಟಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಸಿಮಿಕೋಟ್‌ನಲ್ಲಿ 525, ಹಿಲ್ಸಾದಲ್ಲಿ 550 ಹಾಗೂ ಟಿಬೆಟ್‌ ಭಾಗದಲ್ಲಿ 500 ಯಾತ್ರಿಕರ ಪ್ರವಾಸಕ್ಕೆ ಮಳೆಯಿಂದ ಅಡ್ಡಿಯಾಗಿ ಮಾರ್ಗ ಮಧ್ಯೆಯೇ ರಕ್ಷಣೆ ಪಡೆದಿದ್ದಾರೆ. ನೇಪಾಳ್‌ಗಂಜ್‌ ಮತ್ತು ಸಿಮಿಕೋಟ್‌ನಲ್ಲಿ ಭಾರತೀಯ ರಾಜಭಾರಿ ಕಚೇರಿಯ ಪ್ರತಿನಿಧಿಗಳು ಯಾತ್ರಿಕರೊಂದಿಗೆ ನೇರ ಸಂಪರ್ಕದಲಿದ್ದು, ಅವರ ಆಹಾರ ಮತ್ತು ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆಯ ಬಗ್ಗೆ ಗಮನಹರಿಸಿದ್ದಾರೆ.

ADVERTISEMENT

ಹಿರಿಯ ಯಾತ್ರಿಕರಿಗೆ ಸಿಮಿಕೋಟ್‌ನಲ್ಲಿ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಹಿಲ್ಸಾದಲ್ಲಿ ಅಗತ್ಯ ನೆರವು ನೀಡುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಭಾರತೀಯ ಯಾತ್ರಾರ್ಥಿಗಳನ್ನು ಸೂಕ್ತ ಸ್ಥಳಕ್ಕೆ ರವಾನಿಸಲು ನೇಪಾಳ ಸೇನೆಯ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡುವಂತೆ ಭಾರತ ಸರ್ಕಾರ ಕೋರಿದೆ.

ಯಾತ್ರಿಕರು ಹಾಗೂ ಅವರ ಕುಟುಂಬದವರಿಗಾಗಿ ವಿಶೇಷ ಸಹಾಯವಾಣಿ ರೂಪಿಸಲಾಗಿದೆ. ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಗಳಲ್ಲಿ ಮಾಹಿತಿ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಕನ್ನಡದಲ್ಲಿ ಸಂಪರ್ಕಿಸಲು ಯೋಗಾನಂದ ಎಂಬುವವರ ನಂಬರ್ ನೀಡಲಾಗಿದೆ. ಸಂಖ್ಯೆ:+977-9823672371

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.