ನವದೆಹಲಿ: ‘ದೇಶದಲ್ಲಿ 9 ಲಕ್ಷ ಕೋವಿಡ್ ರೋಗಿಗಳು ಆಮ್ಲಜನಕ ಸಹಾಯದಲ್ಲಿದ್ದು, 1.7 ಲಕ್ಷ ಮಂದಿ ವೆಂಟಿಲೇಟರ್ನಲ್ಲಿದ್ದಾರೆ’ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಶನಿವಾರ ತಿಳಿಸಿದ್ದಾರೆ.
ಕೋವಿಡ್ ಪರಿಸ್ಥಿತಿಯ ಕುರಿತು ನಡೆದ ಸಚಿವರ ಸಮೂಹ (ಜಿಒಎಂ) ಸಭೆಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಪ್ರಕರಣಗಳ ಪೈಕಿ ಶೇಕಡ 1.34 ಮಂದಿ ಐಸಿಯುನಲ್ಲಿದ್ದು, ಶೇಕಡ 0.39 ವೆಂಟಿಲೇಟರ್ನಲ್ಲಿ ಮತ್ತು ಶೇ. 3.70 ರೋಗಿಗಳಿಗೆ ಆಮ್ಲಜನಕ ಸಹಾಯದಲ್ಲಿದ್ದಾರೆ’ ಎಂದು ಮಾಹಿತಿ ನೀಡಿದರು.
180 ಜಿಲ್ಲೆಗಳಲ್ಲಿ 1 ವಾರದಿಂದ ಪ್ರಕರಣ ಇಲ್ಲ: ದೇಶದ 180 ಜಿಲ್ಲೆಗಳಲ್ಲಿ ಒಂದು ವಾರದಿಂದ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ ಎಂಬುದನ್ನು ಆರೋಗ್ಯ ಸಚಿವರು ಸಭೆಯ ಗಮನಕ್ಕೆ ತಂದರು.
ಮಹಾರಾಷ್ಟ್ರ ಬಿಟ್ಟರೆ ಅಧಿಕ ಸಕ್ರಿಯ ಪ್ರಕರಣಗಳು ಇರುವ ರಾಜ್ಯ ಕರ್ನಾಟಕ. ಬೆಂಗಳೂರು ನಗರ, ಪುಣೆ, ದೆಹಲಿ, ನಾಗಪುರ, ಮುಂಬೈ, ಎರ್ನಾಕುಲಂ, ಕೋಜಿಕೋಡ್, ಠಾಣೆ, ನಾಸಿಕ್, ಮಲಪ್ಪುರಂ, ತ್ರಿಶೂರ್, ಜೈಪುರ, ಗುರುಗ್ರಾಮ, ತಿರುವನಂತಪುರ, ಪಾಲಕ್ಕಾಡ್ಗಳಲ್ಲಿ ದೊಡ್ಡ ಪ್ರಮಾಣದ ಸಕ್ರಿಯ ಪ್ರಕರಣಗಳಿವೆ ಎಂದು ಸಚಿವರು ಮಾಹಿತಿ ನೀಡಿದರು.
ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ಪುರಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸೂಖ್ ಮಾಂಡವೀಯಾ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.