ನವದೆಹಲಿ: ಚುನಾವಣಾ ಸಮಯದಲ್ಲಿ ಸುಳ್ಳು ಸುದ್ದಿ ಹರಡದಂತೆ ಎಷ್ಟೇ ಕ್ರಮ ತೆಗೆದುಕೊಂಡಿದ್ದರೂ, ಬಿಜೆಪಿಯ ಮಾರ್ಗದರ್ಶಕ ಮಂಡಳಿಯ ಹಿರಿಯರಾದ ಎಲ್.ಕೆ. ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಅವರು ಸುಳ್ಳುಸುದ್ದಿ ಬಲೆಗೆ ಸಿಲುಕಿದ್ದಾರೆ.
ಮುರಳಿ ಮನೋಹರ ಜೋಷಿ ಅವರ ಹೆಸರಿನಲ್ಲಿ ಬರೆಯಲಾದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲದಿನ
ಗಳಿಂದ ಹರಿದಾಡುತ್ತಿದೆ. ಬಿಜೆಪಿ ಈ ಬಾರಿ 120ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಚುನಾವಣಾ ಆಯುಕ್ತ ಸುನೀಲ್ ಆರೋರಾ ಅವರಿಗೆ ಜೋಷಿ ಸೋಮವಾರ ಪತ್ರ ಬರೆದಿದ್ದಾರೆ. ‘ಅಡ್ವಾಣಿ ಅವರಿಗೆ ನನ್ನ ಹೆಸರಿನಲ್ಲಿ ಬರೆದಿದ್ದು ಎನ್ನಲಾದ ಪತ್ರದ ಬಗ್ಗೆ ಸ್ನೇಹಿತರು ಮಾಹಿತಿ ನೀಡಿದರು. ಆದರೆ ಅಡ್ವಾಣಿ ಅವರಿಗೆ ನಾನು ಯಾವುದೇ ಪತ್ರ ಬರೆದಿಲ್ಲ. ತಕ್ಷಣವೇ ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ, ಪತ್ರದ ಮೂಲವನ್ನು ಪತ್ತೆಹಚ್ಚಿ’ ಎಂದು ಚುನಾವಣಾ ಆಯುಕ್ತರನ್ನು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.