ನವದೆಹಲಿ: ದಕ್ಷಿಣ ದೆಹಲಿಯ 'ಬಾಬಾ ಕಾ ಡಾಬಾ'ದ ಮಾಲೀಕ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
81 ವರ್ಷದ ಪ್ರಸಾದ್ ಗುರುವಾರ ಆತ್ಮಹತ್ಯಗೆ ಯತ್ನಿಸಿದ್ದಾರೆ. ಇದರ ಹಿಂದಿನ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ 11.15ಕ್ಕೆ ಪ್ರಸಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಫ್ದರ್ಜಂಗ್ ಆಸ್ಪತ್ರೆಯಿಂದ ಮಾಹಿತಿ ಬಂದಿದೆ. ಬಳಿಕ ಮಾಹಿತಿ ಸಂಗ್ರಹಿಸಿರುವ ಪೊಲೀಸರು ದೂರು ದಾಖಲಿಸಿದ್ದಾರೆ. ಮದ್ಯಪಾನ ಹಾಗೂ ನಿದ್ರಾ ಮಾತ್ರೆಗಳು ಪ್ರಜ್ಞಾಹೀನತೆಗೆ ಕಾರಣವಾಗಿದೆ ಎಂಬುದು ಉಲ್ಲೇಖವಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.
ಪ್ರಸಾದ್ ಅವರ ಪುತ್ರ ಕರಣ್ ಹೇಳಿಕೆಯನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಕಳೆದ ವರ್ಷ ಕೋವಿಡ್ ಲಾಕ್ಡೌನಿಂದಾಗಿ ಹೋಟೆಲ್ನಲ್ಲಿ ಗ್ರಾಹಕರ ಕೊರತೆಯಿಂದಾಗಿ ಸಂಕಷ್ಟ ಎದುರಿಸುತ್ತಿರುವುದರ ಬಗ್ಗೆ ಪ್ರಸಾದ್ ಕಣ್ಣೀರಿಡುತ್ತಾ ಮಾತನಾಡಿರುವ ವಿಡಿಯೊ ವೈರಲ್ ಆಗಿತ್ತು. ಈ ವಿಡಿಯೊವನ್ನು ಯೂಟ್ಯೂಬರ್ ಗೌರವ್ ವಾಸನ್ ಎಂಬುವವರು ಬಿಡುಗಡೆಗೊಳಿಸಿದ್ದರು.
ಬಳಿಕ ನನ್ನ ಹೆಸರನ್ನು ಹೇಳಿಕೊಂಡು ದೇಣಿಗೆ ಮೊತ್ತವನ್ನು ವಸೂಲಿ ಮಾಡಿದ್ದಾರೆ ಎಂದು ವಾಸನ್ ವಿರುದ್ಧ ದೂರು ದಾಖಲಿಸಿದ್ದರು.
ಗ್ರಾಹಕರಿಲ್ಲದೆ ನಷ್ಟವನ್ನು ಅನುಭವಿಸಿದ್ದ ಹಿನ್ನೆಲೆಯಲ್ಲಿ ಹೋಟೆಲ್ ಮುಚ್ಚಿದ್ದರು. ಇತ್ತೀಚಿಗೆ ಡಾಬಾಕ್ಕೆ ತೆರಳಿದ ಪ್ರಸಾದ್ ಅವರು ವಾಸನ್ ಬಳಿ ಕ್ಷಮೆಯಾಚಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.