ADVERTISEMENT

Pahalgam Attack: ಹಿಂದೂಗಳ ಗುರಿಯಾಗಿಸಿದ್ದು ದಾಳಿಕೋರರ ವಿಭಜನೆ ಸಂಚು: BJP ನಾಯಕ

ಪಿಟಿಐ
Published 23 ಏಪ್ರಿಲ್ 2025, 14:40 IST
Last Updated 23 ಏಪ್ರಿಲ್ 2025, 14:40 IST
 ಬಿಜೆಪಿ ನಾಯಕ ಚಂದ್ರಶೇಖರ್‌ ಬವಾಂಕುಲೆ
ಬಿಜೆಪಿ ನಾಯಕ ಚಂದ್ರಶೇಖರ್‌ ಬವಾಂಕುಲೆ   

ನಾಗ್ಪುರ: ‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಗುರಿಯಾಗಿಸಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹಿಂದೂಗಳನ್ನು ಗುರಿಯಾಗಿಸಿದ್ದು ದೇಶದಲ್ಲಿ ಧರ್ಮಾಧಾರಿತವಾಗಿ ವಿಭಜಿಸುವ ತಂತ್ರವಾಗಿದೆ. ಈ ಘಟನೆಯನ್ನು ರಾಜಕೀಯಗೊಳಿಸುವುದನ್ನು ರಾಜಕೀಯ ಪಕ್ಷಗಳು ಮತ್ತು ನಾಗರಿಕರು ತಡೆಯಬೇಕು’ ಎಂದು ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ ಬವಾಂಕುಲೆ ಹೇಳಿದ್ದಾರೆ. 

ಮಿನಿ ಸ್ವಿಟ್ಜರ್ಲೆಂಡ್‌ ಎಂದೇ ಕರೆಯಲಾಗುವ ಪಹಲ್ಗಾಮ್‌ಗೆ ಭೇಟಿ ನೀಡಿದ್ದ ಪ್ರವಾಸಿಗರನ್ನೇ ಗುರಿಯಾಗಿಸಿ ಭಯೋತ್ಪಾದಕರು ಮಂಗಳವಾರ ದಾಳಿ ನಡೆಸಿದ್ದರು. ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿ 26 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. 2019ರಲ್ಲಿ ನಡೆದ ಪುಲ್ವಾಮಾ ದಾಳಿಯ ನಂತರದ ಅತಿ ದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ. 

ದಾಳಿ ಕುರಿತು ಮಾತನಾಡಿರುವ ಬವಾಂಕುಲೆ, ‘ಹೃದಯ ಕಲುಕುವ ಈ ಘಟನೆ ಇಡೀ ದೇಶವನ್ನೇ ಸ್ತಬ್ಧಗೊಳಿಸಿದೆ. ಆದರೆ ಕೆಲವರು ಈ ಘಟನೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ರಾಜಕೀಯಗೊಳಿಸುತ್ತಿರುವುದು ದುರದೃಷ್ಟಕರ. ಇಂಥ ಸಂದರ್ಭದಲ್ಲಿ ಜನರು ಸರ್ಕಾರ ಮತ್ತು ನೊಂದ ಕುಟುಂಬದವರ ಜೊತೆ ನಿಲ್ಲಬೇಕು’ ಎಂದಿದ್ದಾರೆ.

ADVERTISEMENT

‘ದಾಳಿ ನಡೆಸಿದ ಭಯೋತ್ಪಾದಕರು ಧರ್ಮ ಕೇಳಿ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದಾರೆ. ಇಂಥ ಮಾದರಿಯ ಭಯೋತ್ಪಾದನೆ ಕಾಶ್ಮೀರದಲ್ಲಿ ನಡೆದಿದೆ ಎಂದರೆ, ದೇಶದಲ್ಲಿ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಸಂಚು ಹೂಡಿದ್ದಾರೆ ಎಂದರ್ಥ. ಹೀಗಾಗಿ ಇವರ ಸಂಚಿಗೆ ಒಳಗಾಗದೆ, ಘಟನೆಯನ್ನು ರಾಜಕೀಯಗೊಳಿಸುವ ಯತ್ನಕ್ಕೆ ಯಾರೂ ಯತ್ನಿಸಬಾರದು’ ಎಂದು ಬವಾಂಕುಲೆ ಹೇಳಿದ್ದಾರೆ.

‘ದಾಳಿ ನಡೆಸಿದ ಮತ್ತು ಸಂಚು ರೂಪಿಸಿದವರನ್ನು ಸರ್ಕಾರ ಹೆಡೆಮುರಿ ಕಟ್ಟಲಿದೆ. ಘಟನೆ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರು ಮಾಹಿತಿ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರದ ಆರು ಮುಗ್ದ ಜನರು ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದೇನೆ. ಅಗತ್ಯವಿರುವ ನೆರವಿಗೆ ಎಲ್ಲಾ ಹಂತಗಳಲ್ಲೂ ಸರ್ಕಾರ ನೆರವಾಗುತ್ತಿದೆ’ ಎಂದು ಹೇಳಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ರಾಜ್ಯದಲ್ಲಿ ಶಾಂತಿ ನೆಲೆಸಿದ್ದನ್ನೇ ಭಯೋತ್ಪಾದಕರು ಗುರಿಯಾಗಿಸಿದ್ದಾರೆ. ಉತ್ತಮ ಮತ್ತು ಶಾಂತಿಯುತ ಕಾಶ್ಮೀರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.