ಶಶಿ ತರೂರ್
(ಪ್ರಜಾವಾಣಿ ಸಂಗ್ರಹ ಚಿತ್ರ)
ತಿರುವನಂತಪುರ: ಪಹಲ್ಗಾಮ್ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡದಿದ್ದರೆ, ಇಂತಹ ದಾಳಿಗಳು ಮುಂದುವರಿಯಲಿವೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಎಚ್ಚರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ಕಳೆದವಾರ ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ತರೂರ್, ಪಹಲ್ಗಾಮ್ ದಾಳಿಗೆ ಭಾರತ ನೀಡುವ ಪ್ರತಿಕ್ರಿಯೆಗಾಗಿ ಎಲ್ಲರೂ ಕಾಯುತ್ತಿದ್ದಾರೆ ಎಂದಿದ್ದಾರೆ.
'ನನ್ನ ಪ್ರಕಾರ, ಪ್ರತಿಕ್ರಿಯೆ ನೀಡಲೇಬೇಕು. ಅದರಲ್ಲಿ, ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಬೇಕು. ತಪ್ಪಿಸಿಕೊಳ್ಳುವ ಕಾಲ ಮುಗಿಯಿತು. ಈಗ ತಪ್ಪಿಗೆ ತಕ್ಕ ಬೆಲೆ ತೆರಲೇಬೇಕು. ಮತ್ತೆ ಅಂತಹ ಕೃತ್ಯವೆಸಗಿದರೆ ಪರಿಣಾಮ ಇನ್ನಷ್ಟು ದೊಡ್ಡದಾಗಿರಬೇಕು' ಎಂದು ಹೇಳಿದ್ದಾರೆ.
ಮುಂದುವರಿದು, 'ಒಂದು ವೇಳೆ, ಅಂತಹ ಪ್ರತಿಕ್ರಿಯೆ ನೀಡದಿದ್ದರೆ, ಇಂತಹ ಕೃತ್ಯಗಳು ಮುಂದುವರಿಯುತ್ತವೆ' ಎಂದು ಎಚ್ಚರಿಸಿದ್ದಾರೆ.
ಇದಕ್ಕೂ ಮೊದಲು ತರೂರ್ ಅವರು, ಯಾವುದೇ ದೇಶವು ಶೇ 100 ರಷ್ಟು ಗುಪ್ತಚರ ಮಾಹಿತಿ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆ ಹೇಳಿಕೆಗೆ ಕಾಂಗ್ರೆಸ್ನಲ್ಲೇ ಟೀಕೆ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ, ಗುಪ್ತಚರ ವೈಫಲ್ಯದ ಹೊಣೆಯನ್ನು ಹೊರಲೇಬೇಕಿದೆ. ಆದರೆ, ಅದರ ಬಗ್ಗೆ ಚರ್ಚೆ ಮಾಡುತ್ತಾ ಕೂರುವ ಸಮಯ ಇದಲ್ಲ. ಮೊದಲು ತಕ್ಕಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.