ವಾಷಿಂಗ್ಟನ್(ಅಮೆರಿಕಾ): ಕಾಶ್ಮೀರ ಸಮಸ್ಯೆ ಇತ್ಯರ್ಥವಾಗುವವರೆಗೂ ಭಾರತದೊಂದಿಗೆ ಯಾವುದೇ ಶಾಂತಿ ಮಾತುಕತೆ ನಡೆಸಲು ತಾವು ಸಿದ್ದರಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ತಿಳಿಸಿದ್ದಾರೆ.
ಅಮೆರಿಕಾದ ವಾಷಿಂಗ್ಟನ್ನಲ್ಲಿರುವ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಮತ್ತು ಇಂಟರ್ನ್ಯಾಷನಲ್ ಸ್ಟಡೀಸ್(ಸಿಎಸ್ಐಎಸ್) ನಲ್ಲಿ ಮಾತನಾಡಿರುವ ಅವರು, ‘ಕಾಶ್ಮೀರ ಸಮಸ್ಯೆ ಬಗೆಹರಿಸಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರುಮಧ್ಯಸ್ಥಿಕೆ ವಹಿಸಬೇಕು’ಎಂದು ಆಗ್ರಹಿಸಿದ್ದಾರೆ.
‘ನಮ್ಮ ಸರ್ಕಾರ ನೆರೆಯವರೊಂದಿಗೆ ಶಾಂತಿಯಿಂದ ಇರಲು ಬಯಸುತ್ತದೆ. ಅಭಿವೃದ್ಧಿ ಮತ್ತು ಆರ್ಥಿಕ ಸುಧಾರಣೆಗೆ ನಮಗೆ ಶಾಂತಿ ಅವಶ್ಯಕವಾಗಿದೆ. ಆದರೆ, ನಮ್ಮ ಗೌರವವನ್ನು ಬದಿಗಿಟ್ಟು ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಸಾಧ್ಯವಿಲ್ಲ. ಕಾಶ್ಮೀರ ಸಮಸ್ಯೆ ಇತ್ಯರ್ಥವಾಗುವವರೆಗೂ ನಾವು ಶಾಂತಿ ಮಾತುಕತೆಗೆ ಸಿದ್ದರಿಲ್ಲ‘ ಎಂದುಖುರೇಶಿ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದುಹಾಕಿದ ನಂತರ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ಸಂಬಂಧ ತೀವ್ರವಾಗಿ ಬಿಗಡಾಯಿಸಿದೆ. ಜಾಗತಿಕ ವೇದಿಕೆಯಲ್ಲಿ ಕಾಶ್ಮೀರ ವಿಚಾರವನ್ನು ಮುನ್ನೆಲೆಗೆ ತರುವ ಪ್ರಯತ್ನವನ್ನು ಪಾಕಿಸ್ತಾನದವು ಮಾಡುತ್ತಲೇ ಇದೆ. ಪಾಕಿಸ್ತಾನದ ವಾದಕ್ಕೆ ಜಾಗತಿಕ ಮಟ್ಟದಲ್ಲಿ ಯಾವುದೇ ಮನ್ನಣೆ ದೊರೆತಿಲ್ಲ ಎಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.