ADVERTISEMENT

ಗಡಿ ದಾಟಿ ಪಾಕಿಸ್ತಾನ ತಲುಪಿದ್ದ ಹೈದರಾಬಾದ್ ಟೆಕಿ; 4 ವರ್ಷಗಳ ಬಳಿಕ ತವರಿಗೆ

ಪಿಟಿಐ
Published 1 ಜೂನ್ 2021, 15:15 IST
Last Updated 1 ಜೂನ್ 2021, 15:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್: ನಾಲ್ಕು ವರ್ಷಗಳ ಹಿಂದೆ ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿ, ಬಂಧನಕ್ಕೆ ಒಳಗಾಗಿದ್ದ ಹೈದರಾಬಾದ್‌ ಮೂಲದ ಐಟಿ ವೃತ್ತಿಪರರೊಬ್ಬರನ್ನು ಬಿಡುಗಡೆ ಮಾಡಿರುವುದಾಗಿ ಸೈಬರಾಬಾದ್ ಪೊಲೀಸ್ ಆಯುಕ್ತ ವಿಸಿ ಸಜ್ಜನಾರ್ ಮಂಗಳವಾರ ತಿಳಿಸಿದ್ದಾರೆ.

2017ರ ಏಪ್ರಿಲ್‌ನಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಗಡಿ ದಾಟಿದ್ದಕ್ಕಾಗಿ 32 ವರ್ಷದ ವೈಂಡಮ್ ಪ್ರಶಾಂತ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಹವಾಲ್ಪುರ್ ಪೊಲೀಸರು ಬಂಧಿಸಿದ್ದರು.

ಬಳಿಕ, ತನ್ನ ಗೆಳತಿಯನ್ನು ಭೇಟಿಯಾಗಲು ಸ್ವಿಡ್ಜರ್‌ಲೆಂಡ್‌ಗೆ ಹೋಗಲು ಯತ್ನಿಸುತ್ತಿದ್ದಾಗ ತನ್ನನ್ನು ಪೊಲೀಸರು ಬಂಧಿಸಿ ಪಾಕಿಸ್ತಾನದ ಜೈಲಿನಲ್ಲಿಟ್ಟಿರುವುದಾಗಿ ಹೇಳುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿತ್ತು.

ADVERTISEMENT

ಆತ ಮನೆಗೆ ಮರಳದಿದ್ದಾಗ ಅವರ ತಂದೆ ಬಾಬು ರಾವ್ ಅವರು ಮಾಧಾಪುರ ಪೊಲೀಸರಿಗೆ ದೂರು ನೀಡಿದ್ದರು.

ಅವರ ಮಗನ ವಿಡಿಯೊ ವೈರಲ್ ಆದ ನಂತರ, ಬಾಬು ರಾವ್ ಅವರು ಸಜ್ಜನಾರ್ ಅವರನ್ನು ಸಂಪರ್ಕಿಸಿದರು, ಅವರು ಪಾಕಿಸ್ತಾನದಿಂದ ಪ್ರಶಾಂತ್ ಅವರನ್ನು ಹಸ್ತಾಂತರಿಸುವಂತೆ ಕೋರಿ ರಾಜ್ಯ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ತನ್ನನ್ನು ಮರಳಿ ಕರೆತರಲು ಮಾಡಿದ ಪ್ರಯತ್ನಕ್ಕೆ ತೆಲಂಗಾಣ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸಿರುವ ಪ್ರಶಾಂತ್, 'ಇಷ್ಟು ಬೇಗ ಭಾರತಕ್ಕೆ ಬರುತ್ತೇನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಾನು ತೆಲಂಗಾಣ ಸರ್ಕಾರ ಮತ್ತು ಕೇಂದ್ರಕ್ಕೆ ತುಂಬಾ ಋಣಿಯಾಗಿದ್ದೇನೆ' ಎಂದು ಹೇಳಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಾಕಿಸ್ತಾನದ ಪೊಲೀಸರು ತಮ್ಮನ್ನು ಥಳಿಸಿದ್ದಾರೆ. ಅವರು ನಮ್ಮನ್ನು ಅನುಮಾನಿಸಿದರೂ ಕೂಡ ಅವರಲ್ಲಿ ದೋಷವನ್ನು ಕಂಡುಹಿಡಿಯಲು ನಾನು ಬಯಸುವುದಿಲ್ಲ. ಲಾಹೋರ್ ಜೈಲಿನಲ್ಲಿ ಜೈಲು ಅಧಿಕಾರಿಗಳು ಮತ್ತು ಕೈದಿಗಳು ಉತ್ತಮವಾಗಿ ನೋಡಿಕೊಂಡರು. ಪಾಕಿಸ್ತಾನದ ಮೂಲಕ ಸ್ವಿಡ್ಜರ್ಲೆಂಡ್‌ಗೆ ಭೂ ಮಾರ್ಗವಿದೆ, ಇದು ಸುಮಾರು 60 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಪ್ರಶಾಂತ್ ಹೇಳಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ನಮ್ಮನ್ನು ಹಲವಾರು ದಿನಗಳ ಕಾಲ ಪಾಕಿಸ್ತಾನದ ಸೇನಾ ಸಿಬ್ಬಂದಿ ವಿಚಾರಣೆಗೆ ಒಳಪಡಿಸಿದರು, ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಅವರು ನಮ್ಮನ್ನು ಭಾರತೀಯ ಗೂಢಾಚಾರರೆಂದು ಶಂಕಿಸಿದ್ದರು ಎಂದಿದ್ದಾರೆ.

ಸೈಬರಾಬಾದ್ ಪೊಲೀಸರು ನೀಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ, ಪ್ರಶಾಂತ್ ಬಿಕನೇರ್‌ಗೆ ರೈಲು ಹತ್ತಿದರು ಮತ್ತು ಅಲ್ಲಿಂದ ಅವರು ಇಂಡೋ-ಪಾಕ್ ಗಡಿಗೆ ಹೋಗಿ ಅಲ್ಲಿ ಬೇಲಿಯನ್ನು ಹಾರಿದರು. ವೈಯಕ್ತಿಕ ಕಾರಣಗಳಿಗಾಗಿ ಅವರು ಪಾಕಿಸ್ತಾನಕ್ಕೆ ಹೋಗಲು ಬಯಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.