
ಕವಿಂದರ್ ಗುಪ್ತಾ
ಜಮ್ಮು: ಪಾಕಿಸ್ತಾನವು ಆರ್ಥಿಕ ಬಿಕ್ಕಟ್ಟು ಸೇರಿದಂತೆ ಆಂತರಿಕ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಭಾರತದತ್ತ ಡ್ರೋನ್ಗಳನ್ನು ಕಳುಹಿಸುವುದು ಸೇರಿದಂತೆ ಗಡಿಯಲ್ಲಿ ಕುಕೃತ್ಯವನ್ನು ಎಸಗುತ್ತಿದೆ ಎಂದು ಲಡಾಖ್ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಹೇಳಿದರು.
ಶಾಕ್ಸಗಾಮ್ ಕಣಿವೆ ವಿಚಾರವಾಗಿ ಚೀನಾ ಹೇಳಿಕೆಯನ್ನು ಅಲ್ಲಗಳೆದ ಅವರು, ‘ಇದು 1962ರ ಭಾರತ ಅಲ್ಲ; 2026ರ ಭಾರತ. ಇದನ್ನು ಅವರು (ಚೀನಾ) ಅರ್ಥಮಾಡಿಕೊಳ್ಳಬೇಕು’ ಎಂದು ತಿರುಗೇಟು ನೀಡಿದರು.
ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು, ‘ಗಡಿಯಾದ್ಯಂತ ಕನಿಷ್ಠ ಎಂಟು ಉಗ್ರ ನೆಲೆಗಳು ಸಕ್ರಿಯವಾಗಿವೆ’ ಎಂದು ನೀಡಿದ್ದ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಾಕಿಸ್ತಾನವು ತನ್ನ ದುರ್ವರ್ತನೆಗೆ ತಕ್ಕ ಪರಿಣಾಮ ಎದುರಿಸಲಿದೆ’ ಎಂದರು.
‘ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಇನ್ನೂ ಮುಕ್ತಾಯವಾಗಿಲ್ಲ. ಪಾಕಿಸ್ತಾನವು ದುರ್ವರ್ತನೆಯನ್ನು ಮುಂದುವರಿಸಿದಲ್ಲಿ ಪರಿಣಾಮವನ್ನು ಎದುರಿಸಲಿದೆ. ಬಲೂಚಿಸ್ತಾನ, ಸಿಂಧ್, ಕರಾಚಿ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತ್ಯೇಕತಾವಾದದ ಧ್ವನಿಗಳು ತೀವ್ರಗೊಳ್ಳುತ್ತಿವೆ. ಇದೇ ಬೆಳವಣಿಗೆ ಮುಂದುವರಿದರೆ ಪಾಕಿಸ್ತಾನ ಹೆಚ್ಚು ದಿನ ಉಳಿಯುವುದು ಕಷ್ಟಸಾಧ್ಯ. ಅದರ ವಿಘಟನೆ ಅನಿವಾರ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.