ಮುಂಬೈ:‘ಚುನಾವಣಾ ಪ್ರಚಾರದ ವೇಳೆ ಯಾವುದೇ ಕಾರಣಕ್ಕೂ ಸೀಟಿ ಊದಬಾರದು’. ಇದು ಮಹಾರಾಷ್ಟ್ರದ ಬಹುಜನ್ ವಿಕಾಸ್ ಅಘಾಡಿ ಶಾಸಕ ಕ್ಷಿತಿಜ್ ಠಾಕೂರ್ಗೆ ಪಾಲ್ಘರ್ ಜಿಲ್ಲಾ ಚುನಾವಣಾಧಿಕಾರಿ ಸೂಚನೆ!
ಇದಕ್ಕೆ ಕಾರಣವಿದೆ.ಬಹುಜನ್ ವಿಕಾಸ್ ಅಘಾಡಿ ಪಕ್ಷದ ಚುನಾವಣಾ ಚಿಹ್ನೆ ‘ಸೀಟಿ’ಯದ್ದು. ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಪಕ್ಷದ ಅಭ್ಯರ್ಥಿಗಳು ವಿಪರೀತವಾಗಿ ಸೀಟಿ ಊದುವ ಬಗ್ಗೆಪ್ರತಿಸ್ಪರ್ಧಿ ಪಕ್ಷದಅಭ್ಯರ್ಥಿಯೊಬ್ಬರು ಆಯೋಗಕ್ಕೆ ದೂರು ನೀಡಿದ್ದರು. ಪರಿಣಾಮವಾಗಿ ಆಯೋಗ ಕ್ರಮ ಕೈಗೊಂಡಿದೆ.
ನಾಲಸೋಪರಾದ ಹಾಲಿ ಶಾಸಕರಾಗಿರುವಠಾಕೂರ್ಗೆ ನೋಟಿಸ್ ನೀಡಿರುವ ಚುನಾವಣಾಧಿಕಾರಿ ಎ.ವಿ.ಕಡಂ ಅವರು, ಪ್ರಚಾರ ಅಭಿಯಾನದ ವೇಳೆ ಸೀಟಿ ಊದದಂತೆ ಸೂಚಿಸಿದ್ದಾರೆ.
ಅಭ್ಯರ್ಥಿಗೆ ಸೀಟಿಯ ಚಿಹ್ನೆ ನೀಡಿರುವುದು ಪ್ರಚಾರದ ವೇಳೆ ಸೀಟಿ ಊದುವುದಕ್ಕಲ್ಲ. ಸೀಟಿ ಊದುವುದರಿಂದ ಸ್ಥಳೀಯ ನಿವಾಸಿಗಳಿಗೆ, ಹಿರಿಯ ನಾಗರಿಕರಿಗೆ ಮತ್ತು ರೋಗದಿಂದ ಬಳಲುತ್ತಿರುವವರಿಗೆ ತೊಂದರೆಯಾಗುತ್ತದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಸೀಟಿ ಊದಿದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಬಹುಜನ್ ವಿಕಾಸ್ ಅಘಾಡಿ ಪಕ್ಷದ ಮುಖ್ಯಸ್ಥರಾಗಿರುವ ಹಿತೇಂದ್ರ ಠಾಕೂರ್ ಮಗನಾಗಿರುವ ಕ್ಷಿತಿಜ್,ನಾಲಸೋಪರಾ ಕ್ಷೇತ್ರದಲ್ಲಿ ಶಿವಸೇನಾದ ಪ್ರದೀಪ್ ಶರ್ಮಾ ವಿರುದ್ಧ ಕಣಕ್ಕಿಳಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.