ನವದೆಹಲಿ (ಪಿಟಿಐ):ಮುಂಬೈ ಪೊಲೀಸ್ ಕಮಿಷನರ್ ಸ್ಥಾನದಿಂದ ವರ್ಗಾವಣೆಯಾದ ನಂತರವಷ್ಟೇ ಪರಮ್ಬೀರ್ ಸಿಂಗ್ ಮಾಜಿ ಗೃಹ ಸಚಿವರ ವಿರುದ್ಧ ಆರೋಪ ಮಾಡಿದ್ದು, ಅವರನ್ನು ಭ್ರಷ್ಟಾಚಾರದ ವಿರುದ್ಧದ ಹೋರಾಟಗಾರ ಎಂದು ಪರಿಗಣಿಸಲಾಗದು ಎಂದು ಮಹಾರಾಷ್ಟ್ರ ಸರ್ಕಾರವು ಸುಪ್ರಿಂಕೋರ್ಟ್ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಪ್ರತಿಪಾದಿಸಿದೆ.
ಮಹಾರಾಷ್ಟ್ರದ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ವೆಂಕಟೇಶ್ ಮಾಧವ್ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೀಗಾಗಿ, ಸಿಬಿಐ ತನಿಖೆಗೆ ಕೋರಿ ಪರಮ್ಬೀರ್ ಸಿಂಗ್ ಅವರು ಸಲ್ಲಿಸಿರುವ ಅರ್ಜಿಯನ್ನು ವಜಾಮಾಡಬೇಕು ಎಂದು ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ಎಸ್.ಕೆ.ಕೌಲ್ ನೇತೃತ್ವದ ಪೀಠವು ನ.22ರಂದು ಸಿಂಗ್ ಅವರಿಗೆ ಜಾಮೀನು ನೀಡಿದ್ದು, ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿಸಬಾರದು ಎಂದು ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಇಡೀ ಪ್ರಕರಣ ಮತ್ತು ತಮ್ಮ ವಿರುದ್ಧ ಕೈಗೊಳ್ಳಬಹುದಾದ ಕ್ರಮ ಕುರಿತಂತೆ ಸಿಬಿಐ ತನಿಖೆ ಕೋರಿ ಸಿಂಗ್ ಸಲ್ಲಿಸಿದ್ದರು . ಈ ಅರ್ಜಿ ವಜಾ ಕೋರಿದ್ದ ಮಹಾರಾಷ್ಟ್ರ ಸರ್ಕಾರ, ಅವರ ವಿರುದ್ಧದ ತನಿಖೆ ಸಂಬಂಧ ಮಧ್ಯಪ್ರವೇಶಿಸಬಾರದು ಎಂದು ಮನವಿ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.