ಕನೌಜ್: ಉತ್ತರಪ್ರದೇಶದ ಕನೌಜ್ನಲ್ಲಿರುವ ಸರ್ಕಾರಿ ಆಸ್ಪತ್ರೆಯೊಂದರ ಆವರಣದಲ್ಲಿ ಒಂದು ವರ್ಷದ ಮಗುವಿನ ಮೃತದೇಹವನ್ನು ಅಪ್ಪಿಕೊಂಡು ಹೆತ್ತವರು ಅಳುತ್ತಿರುವ ವಿಡಿಯೊವೊಂದು ಟ್ವಿಟರ್ನಲ್ಲಿ ವೈರಲ್ ಆಗಿದೆ.
ಪ್ರೇಮ್ ಚಂದ್ ಮತ್ತು ಆಶಾದೇವಿ ಎಂಬ ದಂಪತಿ ಮಗ ಅನುಜ್ನ್ನು ಭಾನುವಾರ ರಾತ್ರಿ ಇಲ್ಲಿನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು, ಜ್ವರ ಬಾಧಿಸಿದ್ದ ಮಗು ತೀರಿಕೊಂಡಿತ್ತು. ಯಾವುದೇ ವೈದ್ಯರು ನನ್ನ ಮಗುವಿಗೆ ಚಿಕಿತ್ಸೆ ನೀಡಿಲ್ಲ ಎಂದು ಪ್ರೇಮ್ಚಂದ್ ಅಳುತ್ತಾ ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ನಾವು 45 ನಿಮಿಷ ಕಾದು ಕುಳಿತರೂ ಯಾವುದೇ ವೈದ್ಯರು ಮಗುವನ್ನು ನೋಡಿಲ್ಲ. ಕಾನ್ಪುರ್ಗೆ ಹೋಗುವಂತೆ ಅವರು ಹೇಳಿದರು. ನಾನು ಬಡವ, ನನ್ನಲ್ಲಿ ಹಣವಿಲ್ಲ. ನಾನೇನು ಮಾಡಲಿ ಎಂದು ಪ್ರೇಮ್ಚಂದ್ ಕಣ್ಣೀರಿಟ್ಟಿದ್ದಾರೆ. ಆದಾಗ್ಯೂ, ಪ್ರೇಮ್ಚಂದ್ ಆರೋಪವನ್ನು ವೈದ್ಯಾಧಿಕಾರಿ ಡಾ. ಕೃಷ್ಣ ಸ್ವರೂಪ್ ತಳ್ಳಿ ಹಾಕಿದ್ದಾರೆ.
ಮಿಶಿರ್ಪುರ್ ಗ್ರಾಮದ ನಿವಾಸಿ ಪ್ರೇಮ್ಚಂದ್ ಅವರ ಮಗ ಅನುಜ್ನ್ನು ಆಸ್ಪತ್ರೆಗೆ ದಾಖಲಿಸಿದ್ದರು, ಮಕ್ಕಳ ತಜ್ಞರು ಮಗುವಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಕಿತ್ಸೆ ನೀಡಿ ಅರ್ಧಗಂಟೆಯಲ್ಲಿ ಮಗು ಸಾವಿಗೀಡಾಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯರು ಚಿಕಿತ್ಸೆ ನೀಡಿಲ್ಲ ಎಂಬ ಆರೋಪ ಸರಿಯಲ್ಲ ಎಂದು ಡಾ. ಸ್ವರೂಪ್ ಹೇಳಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.