ನವದೆಹಲಿ: ಅನಿಯಂತ್ರಿತ ಠೇವಣಿ ಯೋಜನೆಗಳನ್ನು ನಿಷೇಧಿಸುವ ಮಸೂದೆಯನ್ನು ರಾಜ್ಯಸಭೆಯಲ್ಲಿ ಸರ್ವಾನುಮತದಿಂದಸೋಮವಾರ ಅಂಗೀಕರಿಸಲಾಯಿತು. ಲೋಕಸಭೆ ಜುಲೈ 24ರಂದು ಈ ಮಸೂದೆಗೆ ಅನುಮೋದನೆ ಕೊಟ್ಟಿತ್ತು.
‘ಹೆಚ್ಚಿನ ಬಡ್ಡಿ ಅಥವಾ ಇನ್ಯಾವುದೋ ಆಮಿಷ ತೋರಿಸಿ ಬಡವರಿಂದ ಠೇವಣಿ ಸಂಗ್ರಹಿಸಿ ಕೊನೆಗೆ ಅವರನ್ನು ವಂಚಿಸುವ ಪ್ರಕರಣಗಳು ಆಗಾಗ ವರದಿಯಾಗುತ್ತವೆ. ಉದ್ದೇಶಿತ ಕಾನೂನು, ಈ ರೀತಿ ಅಕ್ರಮವಾಗಿ ಠೇವಣಿ ಸಂಗ್ರಹಿಸುವುದನ್ನು ತಡೆಯುವ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ’ ಎಂದು ಸರ್ಕಾರ ಹೇಳಿದೆ.
‘ಕ್ರಮಬದ್ಧವಾಗಿ ವ್ಯವಹಾರ ನಡೆಸುವ ಸಂಸ್ಥೆಗಳಿಗೆ ಈ ಕಾನೂನಿನಿಂದ ಯಾವುದೇ ತೊಂದರೆ ಆಗುವುದಿಲ್ಲ. ಮಾತ್ರವಲ್ಲದೆ ಸ್ನೇಹಿತರು ಮತ್ತು ಸಂಬಂಧಿಗಳಿಂದ ಹಣ ಪಡೆಯುವುದಕ್ಕೆ ಕಾನೂನು ಅಡ್ಡಿಯಾಗುವುದಿಲ್ಲ. ಆದರೆ ಜಾಹೀರಾತುಗಳ ಮೂಲಕ ಜನರನ್ನು ಆಕರ್ಷಿಸಿ, ಅನಿಯಂತ್ರಿತವಾದ ಯೋಜನೆ ಮೂಲಕ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವುದನ್ನು ನಿಷೇಧಿಸಲಾಗುತ್ತದೆ’ ಎಂದು ಹಣಕಾಸು ಖಾತೆಯ ರಾಜ್ಯಸಚಿವ ಅನುರಾಗ್ ಠಾಕೂರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.