ADVERTISEMENT

ಸಂಸತ್ ಅಧಿವೇಶನ: ಪ್ರತಿಪಕ್ಷಗಳ ಆಕ್ರೋಶ, ಸತತ 7ನೇ ಬಾರಿ ಅವಧಿಗೆ ಮುನ್ನ ತೆರೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 5:28 IST
Last Updated 9 ಆಗಸ್ಟ್ 2022, 5:28 IST
ಪ್ರತಿಪಕ್ಷಗಳ ಸಂಸದರು ಸೋಮವಾರ ಲೋಕಸಭೆಯ ಕಲಾಪ ಬಹಿಷ್ಕರಿಸಿ ಹೊರನಡೆದರು–ಪಿಟಿಐ ಚಿತ್ರ
ಪ್ರತಿಪಕ್ಷಗಳ ಸಂಸದರು ಸೋಮವಾರ ಲೋಕಸಭೆಯ ಕಲಾಪ ಬಹಿಷ್ಕರಿಸಿ ಹೊರನಡೆದರು–ಪಿಟಿಐ ಚಿತ್ರ   

ನವದೆಹಲಿ: ಬೆಲೆ ಏರಿಕೆ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳುವ ವಿಚಾರದಲ್ಲಿ ಉಂಟಾದ ಗದ್ದಲ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆ, ಪ್ರತಿಪಕ್ಷಗಳ ಒಡುಕು ಬಹಿರಂಗಗೊಂಡ ಹಲವು ವಿದ್ಯಮಾನಗಳೊಂದಿಗೆ ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಅವಧಿಗೂ ಮುನ್ನವೇ ಸೋಮವಾರ ತೆರೆ ಬಿದ್ದಿದೆ.

ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ. ನಿಗದಿಗಿಂತಲೂ ಮೊದಲೇ ಅಧಿವೇಶನ ಕೊನೆಗೊಳ್ಳುತ್ತಿರುವುದು ಇದು ಸತತ ಏಳನೇ ಬಾರಿ.

ಮಂಗಳವಾರ ಮೊಹರಂ ಹಾಗೂ ಗುರುವಾರ ರಕ್ಷಾಬಂಧನ ಹಬ್ಬಗಳಿಗೆ ರಜೆಯಿದೆ. ಈ ಮಧ್ಯೆ ಎರಡು ದಿನಗಳ ಅಧಿವೇಶನ ನಡೆಸಲು ಕಾಲಾವಕಾಶವಿತ್ತು. ಆದರೆ, ಅವಧಿಗೂ ಮುನ್ನವೇ ಅಧಿವೇಶವನ್ನು ಮುಕ್ತಾಯಗೊಳಿಸಲು ಸರ್ಕಾರ ನಿರ್ಧರಿಸಿತು.ಅವಧಿಗೆ ಮುನ್ನವೇ ಅಧಿವೇಶನವನ್ನು ಮುಂದೂಡಿರುವುದಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ADVERTISEMENT

ಟ್ವೀಟ್ ಮಾಡಿರುವ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್, ‘2020ರ ಬಜೆಟ್‌ ಅಧಿವೇಶನದಿಂದ ಆರಂಭವಾಗಿ, ಏಳನೇ ಬಾರಿ ಹೀಗಾಗುತ್ತಿದೆ. ಸಂಸತ್ತಿನ ಅಣಕ ಮಾಡುವುದನ್ನು ನಿಲ್ಲಿಸಿ’ ಎಂದು ಹೇಳಿದರು.

ಲೋಕಸಭೆಯು 44 ಗಂಟೆ (ಶೇ 48) ಹಾಗೂ ರಾಜ್ಯಸಭೆಯು 38 ಗಂಟೆ (ಶೇ 44) ಅವಧಿಯ ಕಲಾಪ ನಡೆಸಲು ಮಾತ್ರ ಸಾಧ್ಯವಾಗಿದೆ.ಗದ್ದಲದ ಕಾರಣದಿಂದ 47 ಗಂಟೆಗಳಷ್ಟು ಅವಧಿಯ ಕಲಾಪ ವ್ಯರ್ಥವಾಗಿದೆ.

ಯಾವ ಮಸೂದೆ ಅಂಗೀಕಾರ?
32 ಮಸೂದೆಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಉದ್ದೇಶಿಸಿತ್ತು. ಈ ಪೈಕಿ ರಾಜ್ಯಸಭೆಯು ಏಳು ಹಾಗೂ ಲೋಕಸಭೆಯು ಐದು ಮಸೂದೆಗಳಿಗಷ್ಟೇ ಅಂಗೀಕಾರ ನೀಡಿದವು. ವೈಯಕ್ತಿಕ ದತ್ತಾಂಶ ಭದ್ರತೆ ಮಸೂದೆಯನ್ನು ಸರ್ಕಾರ ಹಿಂಪಡೆಯಿತು.

ನವೀಕರಿಸಬಹುದಾದ ಇಂಧನಗಳ ಬಳಕೆ ಪ್ರೋತ್ಸಾಹಿಸುವ ಮಸೂದೆ; ನ್ಯೂಡೆಲ್ಲಿ ಇಂಟರ್‌ನ್ಯಾಷನಲ್ ಆರ್‌ಬಿಟ್ರೇಷನ್‌ ಸೆಂಟರ್ ಅನ್ನು ಇಂಡಿಯಾ ಇಂಟರ್‌ನ್ಯಾಷನಲ್ ಆರ್‌ಬಿಟ್ರೇಷನ್‌ ಸೆಂಟರ್ ಎಂದು ಬದಲಾಯಿಸುವ ಮಸೂದೆ; ಹಾಗೂ ನ್ಯಾಷನಲ್ ರೈಲ್ ಅಂಡ್ ಟ್ರಾನ್ಸ್‌ಪೋರ್ಟೇಷನ್ ಯೂನಿವರ್ಸಿಟಿ ಅನ್ನು ಗತಿಶಕ್ತಿ ವಿಶ್ವವಿದ್ಯಾಲಯ ಹೆಸರಿನ ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತಿಸುವ ಮಸೂದೆಗಳಿಗೆ ಒಪ್ಪಿಗೆ ನೀಡಲಾಯಿತು.ವಿದ್ಯುತ್ ತಿದ್ದುಪಡಿ ಮಸೂದೆ 2022 ಅನ್ನು ಸಂಸದೀಯ ಸ್ಥಾಯಿಸಮಿತಿ ಪರಿಶೀಲನೆಗೆ ಒಪ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.