ADVERTISEMENT

 ‘ಕಾಂಗ್ರೆಸ್‌ ಮುಕ್ತ ಭಾರತ’ ಗಾಂಧೀಜಿ ಆಶಯ; ನಾನು ಈಡೇರಿಸುತ್ತಿರುವೆ ಅಷ್ಟೇ– ಮೋದಿ

ಏಜೆನ್ಸೀಸ್
Published 7 ಫೆಬ್ರುವರಿ 2019, 14:46 IST
Last Updated 7 ಫೆಬ್ರುವರಿ 2019, 14:46 IST
   

ನವದೆಹಲಿ:ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಡೆಸುತ್ತಿರುವ ಟೀಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಪ್ರಹಾರ ನಡೆಸಿದ್ದಾರೆ. ಕಾಂಗ್ರೆಸ್‌ ಆಡಳಿತವನ್ನು ಇತಿಹಾಸದ ಕಾಲಘಟ್ಟಕ್ಕೆ ಹೋಲಿಸಿದ್ದಾರೆ.

ಇತಿಹಾಸದ ವಿಷಯಗಳನ್ನು ಮಾತನಾಡುವಾಗ ಬಿ.ಸಿ ಮತ್ತು ಎ.ಡಿ ಎಂಬುದನ್ನು ಪ್ರಸ್ತಾಪಿಸುತ್ತೇವೆ ಎಂದ ಪ್ರಧಾನಿ ಮೋದಿ, ಇದನ್ನು ಕಾಂಗ್ರೆಸ್‌ಗೆ ಅನ್ವಯಿಸಿ; ಬಿಸಿ ಎಂದರೆ ಬಿಫೋರ್‌ ಕಾಂಗ್ರೆಸ್‌(ಕಾಂಗ್ರೆಸ್ ಅವಧಿ ನಂತರ) ಹಾಗೂ ಎಡಿ ಎಂದರೆ ಆಫ್ಟರ್‌ ಡೈನಾಸ್ಟಿ(ಸಾಮ್ರಾಜ್ಯದ ಆಳ್ವಿಕೆ ನಂತರ) ಎಂದರು. ಕಾಂಗ್ರೆಸ್ ಅಂತ್ಯಗೊಳಿಸುವಂತೆ ಮಹಾತ್ಮಾ ಗಾಂಧಿ ಶಿಫಾರಸು ಮಾಡಿದ್ದರು. ಹಾಗಾಗಿ, ’ಕಾಂಗ್ರೆಸ್‌ ಮುಕ್ತ ಭಾರತ’ ಘೋಷಣೆ ನನ್ನದಲ್ಲ. ನಾನು ಗಾಂಧೀಜಿ ಅವರ ಆಶಯವನ್ನು ಪೂರ್ಣಗೊಳಿಸುತ್ತಿದ್ದೇನೆ ಅಷ್ಟ್ರೇ ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆದೇಶದ ಸಶಸ್ತ್ರ ಪಡೆಗಳು ಬಲಗೊಳ್ಳುವುದು ಬೇಕಿಲ್ಲ. ಭದ್ರತಾ ಸಲಕರಣೆಗಳು ಸಮರ್ಥವಾಗಿರುವುದು ಬೇಕಿಲ್ಲ. ಕಾಂಗ್ರೆಸ್‌ ಅವಧಿಯಲ್ಲಿ ಪ್ರತಿಯೊಂದು ಒಪ್ಪಂದಕ್ಕೂ ಒಬ್ಬ ಮಧ್ಯವರ್ತಿಯಿರುತ್ತಿದ್ದ ಎಂದು ಆರೋಪಿಸಿದರು.ಕಾಂಗ್ರೆಸ್‌ ಸೇರುವುದೆಂದರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಹೇಳುತ್ತಿದ್ದರು ಎಂದು ಪ್ರಸ್ತಾಪಿಸಿದರು.

ADVERTISEMENT

ನಿರುದ್ಯೋಗದ ಕುರಿತು ಕಾಂಗ್ರೆಸ್‌ ಆರೋಪಗಳಲ್ಲಿ ಹುರುಳಿಲ್ಲ. ಅಸಂಘಟಿತ ವಲಯಗಳಲ್ಲಿ ಸಾಕಷ್ಟು ಉದ್ಯೋಗಗಳಿವೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ವೃತ್ತಿಪರರಾಗಿದ್ದಾರೆ. ಒಬ್ಬ ವೈದ್ಯ ಕ್ಲಿನಿಕ್‌ ಅಥವಾ ನರ್ಸಿಂಗ್‌ ಹೋಂ ತೆರೆದರೆ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಕೆಲಸ ನೀಡುತ್ತಾರೆಯೇ? ಚಾರ್ಟೆಡ್‌ ಅಕೌಂಟೆಡ್‌ ಒಬ್ಬರು ಕಚೇರಿ ತೆರೆದರೆ ಕೇವಲ ಒಬ್ಬ ವ್ಯಕ್ತಿಗೆ ಉದ್ಯೋಗ ನೀಡುತ್ತಾರೆಯೇ? ಎಂದು ಪ್ರಶ್ನಿಸಿದರು.

(ಬಸವಣ್ಣನವರ ವಚನಗಳನ್ನು ವಾಚಿಸಿದಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ಮೋದಿ ಪ್ರಶ್ನೆ– ನೀವು ಅವುಗಳನ್ನು 25–30 ವರ್ಷಗಳ ಹಿಂದೆಯೇ ಓದಿದ್ದರೆ; ತಪ್ಪು ಮಾರ್ಗ ಮತ್ತು ನಿಯಮಗಳನ್ನು ಕೈಗೊಳ್ಳುತ್ತಿರಲಿಲ್ಲ)

ನೋಟು ರದ್ದತಿಯ ನಂತರದಲ್ಲಿ 3 ಲಕ್ಷ ನಕಲಿ ಸಂಸ್ಥೆಗಳು ಬಾಗಿಲು ಮುಚ್ಚಿವೆ ಎಂದು ನೋಟು ರದ್ದತಿ ಕ್ರಮವನ್ನು ಮತ್ತೆ ಸಮರ್ಥಿಸಿಕೊಂಡರು.

ಅರ್ಧಕ್ಕೆ ನಿಂತಿದ್ದ ಕೃಷಿಗೆ ಸಂಬಂಧಿಸಿದ 99 ಕಾರ್ಯಕ್ರಮಗಳನ್ನು ನಾವು ಪೂರ್ಣಗೊಳಿಸಿದ್ದೇವೆ. ಕಾಂಗ್ರೆಸ್‌ಗೂ ಬೆಲೆ ಏರಿಕೆಗೂ ಅತ್ಯಂತ ನಿಕಟ ಸಂಬಂಧವಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಆದರೆ, ಎನ್‌ಡಿಎ ಸರ್ಕಾರ ಬೆಲೆ ಏರಿಕೆ ಮೇಲೆ ನಿಗಾವಹಿಸಿದೆ ಎಂದರು.

ಕೋಲ್ಕತ್ತದಲ್ಲಿ ವಿರೋಧ ಪಕ್ಷಗಳು ಒಟ್ಟಿಗೆ ಸೇರಿದ್ದನ್ನು ಮೋದಿ 'ಮಹಾಮಿಲಾವಟ್’ ಎಂದು ಕರೆದಿದ್ದಾರೆ. ವಿರೋಧ ಪಕ್ಷಗಳ ಮಹಾಮೈತ್ರಿಯನ್ನು ಮಹಾಮಿಲಾವಟ್(ಅತಿಕಲಬೆರಿಕೆ) ಎಂದಿದ್ದಾರೆ.

ಕಳೆದ 55 ವರ್ಷಗಳಲ್ಲಿ ಶೌಚಾಲಯಗಳ ನಿರ್ಮಾಣ ಶೇ 38ರಷ್ಟು, ಆ ಪ್ರಮಾಣ 55 ತಿಂಗಳಲ್ಲಿ ಶೇ 98ರಷ್ಟಾಗಿದೆ. 55 ವರ್ಷಗಳಲ್ಲಿ 12 ಕೋಟಿ ಅನಿಲ ಸಂಪರ್ಕವಿತ್ತು. ಕೇವಲ 55 ತಿಂಗಳಲ್ಲಿ 13 ಕೋಟಿ ಅನಿಲ ಸಂಪರ್ಕ ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ನಾವು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಿದ್ದೇವೆ ಎಂದು ಪ್ರಶಂಸಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.