ಬನ್ಸ್ವಾರ (ರಾಜಸ್ಥಾನ): ದಾರಿ ಮಧ್ಯೆ ಆ್ಯಂಬುಲೆನ್ಸ್ನ ಇಂಧನ ಖಾಲಿಯಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ರೋಗಿಯೊಬ್ಬರು ಮೃತಪಟ್ಟ ದಾರುಣ ಘಟನೆ ರಾಜಸ್ಥಾನದ ಬನ್ಸ್ವಾರದಲ್ಲಿ ನಡೆದಿದೆ.
ಘಟನೆ ಸಂಬಂಧ ತನಿಖೆಗೆ ಆದೇಶಿಸಿರುವುದಾಗಿ ಬನ್ಸ್ವಾರದ ಮುಖ್ಯ ವೈದ್ಯಾಧಿಕಾರಿ ಡಾ. ಬಿ.ಪಿ ವರ್ಮಾ ತಿಳಿಸಿದ್ದಾರೆ.
ಈ ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯದ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಪ್ರತಾಪ್ ಖಚಾರಿಯವಾಸ್ ಹೇಳಿದ್ದಾರೆ.
ಇಂಧನ ಖಾಲಿಯಾದ ಬಳಿಕ ರೋಗಿಯ ಸಂಬಂಧಿಕರು ಆ್ಯಂಬುಲೆನ್ಸ್ ಅನ್ನು ತಳ್ಳುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ನಿರ್ಲಕ್ಷ್ಯಕ್ಕೆ ನೆಟ್ಟಿಗರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.
‘ಘಟನೆ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ತನಿಖೆಗೆ ಆದೇಶ ಮಾಡಿದ್ದೇವೆ. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬದವರನ್ನು ಭೇಟಿ ಮಾಡಿ, ಏನಾದರೂ ನಿರ್ಲಕ್ಷ್ಯ ಉಂಟಾಗಿದೆಯೇ ಎಂದು ತಿಳುದುಕೊಳ್ಳುತ್ತೇವೆ‘ ಎಂದು ವೈದ್ಯಾಧಿಕಾರಿ ಹೇಳಿದ್ದಾರೆ.
ಖಾಸಗಿ ಮಾಲೀಕತ್ವದ ಆ್ಯಂಬುಲೆನ್ಸ್ ಇದಾಗಿದ್ದು, ಇದಕ್ಕೂ ರಾಜ್ಯದ ಆರೋಗ್ಯ ವ್ಯವಸ್ಥೆಗೂ ಏನೂ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲೂ ಉಚಿತ ಚಿಕಿತ್ಸೆ ಒದಗಿಸುತ್ತಿದೆ. ಖಾಸಗಿ ಮಾಲೀಕತ್ವದ ಆ್ಯಂಬುಲೆನ್ಸ್ನ ಇಂಧನ ಖಾಲಿಯಾಗಿ, ರೋಗಿ ಸಾವಿಗೀಡಾಗಿದ್ದಾರೆ. ಇದಕ್ಕೂ ರಾಜ್ಯದ ಆರೋಗ್ಯ ವ್ಯವಸ್ಥೆಗೂ ಸಂಬಂಧ ಇಲ್ಲ. ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ‘ ಎಂದು ಸಚಿವ ಪ್ರತಾಪ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.