ನವದೆಹಲಿ: ಇಲ್ಲಿನ ಜಿಬಿಟಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರನ್ನು ಗುಂಡಿಟ್ಟು ಹತ್ಯೆಗೈದ ಘಟನೆಯ ಕುರಿತ ತನಿಖೆ ಚುರುಕುಗೊಂಡಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ರೋಗಿಯನ್ನು ಅಪರಾಧಿ ಎಂದು ತಪ್ಪಾಗಿ ತಿಳಿದು, ಅವರ ಮೇಲೆ ಗುಂಡಿನ ದಾಳಿ ನಡೆಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ದಾಳಿಕೋರರ ಗುರಿಯು ಅಪರಾಧಿ ಆಗಿದ್ದ ಎಂದು ಮೃತಪಟ್ಟಿರುವ ರೋಗಿಯ ಕುಟುಂಬಸ್ಥರು ಹೇಳಿದ್ದಾರೆ.
ಪ್ರಕರಣ ನಡೆದ ಆಸ್ಪತ್ರೆಯಲ್ಲಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ದೆಹಲಿ ಸರ್ಕಾರವನ್ನು ಆಗ್ರಹಿಸಿ, ಅಲ್ಲಿನ ವೈದ್ಯರು ಪ್ರತಿಭಟನೆ ನಡೆಸಿದರು.
‘ಜಿಬಿಟಿ ಆಸ್ಪತ್ರೆಯ ವಾರ್ಡ್ ಸಂಖ್ಯೆ 24ರಲ್ಲಿ 18 ವರ್ಷದ ಯುವಕನೊಬ್ಬ, ರೋಗಿ ರಿಯಾಜುದ್ದಿನ್ (32) ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆಯ ತನಿಖೆಗೆ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಈ ಕೃತ್ಯದ ಹಿಂದೆ ಎಷ್ಟು ಮಂದಿ ಭಾಗಿಯಾಗಿದ್ದಾರೆ, ಎಷ್ಟು ಮಂದಿ ಆಸ್ಪತ್ರೆ ಆವರಣ ಪ್ರವೇಶಿಸಿದ್ದಾರೆ, ಯಾವೆಲ್ಲಾ ವಾಹನಗಳನ್ನು ಬಳಸಲಾಗಿದೆ, ಘಟನೆ ಬಳಿಕ ಕೃತ್ಯವೆಸಗಿದವರು ಪರಾರಿಯಾಗಿದ್ದಾರೆ ಎಂಬುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಾವಳಿಗಳನ್ನು ತನಿಖಾ ತಂಡಗಳು ಪರಿಶೀಲನೆ ನಡೆಸುತ್ತಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.