ADVERTISEMENT

ಬಳಲಿರುವ ನಿತೀಶ್‌ಗೆ ಬಿಹಾರವನ್ನು ಮುನ್ನೆಡೆಸಲು ಸಾಧ್ಯವಿಲ್ಲ: ತೇಜಸ್ವಿ ಯಾದವ್‌

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 7:24 IST
Last Updated 2 ನವೆಂಬರ್ 2020, 7:24 IST
ಆರ್‌.ಜೆ.ಡಿ ನಾಯಕ ತೇಜಸ್ವಿ ಯಾದವ್‌
ಆರ್‌.ಜೆ.ಡಿ ನಾಯಕ ತೇಜಸ್ವಿ ಯಾದವ್‌   

ಪಟ್ನಾ: ಬಳಲಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ರಾಜ್ಯವನ್ನು ಮುನ್ನೆಡಸಲು ಸಾಧ್ಯವಿಲ್ಲ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ತಿಳಿಸಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿತೀಶ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ತೇಜಸ್ವಿ ಯಾದವ್‌, 'ಈಗಾಗಲೇ ನಿತೀಶ್‌ ಅವರು ಬಳಲಿದ್ದು, ಬಿಹಾರವನ್ನು ಮುನ್ನೆಡಸಲು ಅವರಿಂದ ಸಾಧ್ಯವಿಲ್ಲ. ಜನರು ಅವರಿಗೆ ವಿದಾಯ ಹೇಳುವ ಕಾಲ ಸನ್ನಿಹಿತವಾಗಿದೆ' ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಕೇವಲ 77 ಪೊಲೀಸರು ಇದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದು ತೇಜಸ್ವಿ ಆರೋಪಿಸಿದ್ದಾರೆ.

ADVERTISEMENT

'ಬಿಹಾರವನ್ನು ಮುನ್ನೆಡೆಸಲು ನೀವು ನಮಗೆ ಅವಕಾಶ ನೀಡಿ. ಕಳೆದ 15 ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್ ಅವರು ಸಾಧಿಲಾಗದ್ದನ್ನು ನಾವು ಸಾಧಿಸಿ ತೋರಿಸುತ್ತೇವೆ' ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.

ಇದೇ ವೇಳೆ, ತಮ್ಮನ್ನು ಕ್ರಿಕೆಟಿಗ ಎಂದು ಲೇವಡಿ ಮಾಡಿದ್ದ ನಿತೀಶ್‌ ವಿರುದ್ಧ ಹರಿಹಾಯ್ದಿರುವ ತೇಜಸ್ವಿ ಯಾದವ್‌, 'ನಿತೀಶ್ ಕುಮಾರ್ ಅವರಿಗೆ ಏನಾಗಿದೆ? ಅಂತಹ ಅನುಭವಿ ರಾಜಕಾರಣಿಯಾಗಿರುವ ಅವರು ಈ ರೀತಿಯಲ್ಲಿ ಏಕೆ ಮಾತನಾಡುತ್ತಾರೆ? ಕ್ರಿಕೆಟ್ ಮತ್ತು ಚಲನಚಿತ್ರಗಳಿಂದ ನಾವು ರಾಜಕೀಯಕ್ಕೆ ಬರಲು ಸಾಧ್ಯವಿಲ್ಲವೇ? ವೈದ್ಯರು, ಎಂಜಿನಿಯರ್‌ಗಳೂ ಸಹ ರಾಜಕಾರಣಕ್ಕೆ ಬರಲು ಸಾಧ್ಯವಿಲ್ಲ ಎಂಬುದಾಗಿ ಅವರ ಮಾತಿನ ಅರ್ಥವೇ?' ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.