ADVERTISEMENT

ಸ್ವಾಭಿಮಾನ ಇದ್ದಿದ್ದರೆ ಕೋಶಿಯಾರಿ ಹುದ್ದೆಯಲ್ಲಿ ಮುಂದುವರಿಯುತ್ತಿರಲಿಲ್ಲ: ಪವಾರ್‌

ಎನ್‌ಸಿಪಿ ಮುಖ್ಯಸ್ಥ ಶರದ್‌ಪವಾರ್ ಟೀಕೆ

ಪಿಟಿಐ
Published 19 ಅಕ್ಟೋಬರ್ 2020, 6:40 IST
Last Updated 19 ಅಕ್ಟೋಬರ್ 2020, 6:40 IST
ಶರದ್‌ ಪವಾರ್
ಶರದ್‌ ಪವಾರ್   

ಮುಂಬೈ: ದೇವಾಲಯಗಳನ್ನು ತೆರೆಯುವ ವಿಚಾರದಲ್ಲಿ ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಡುವಿನ ಪತ್ರ ವ್ಯವಹಾರದ ಸುತ್ತಲಿನ ಬೆಳವಣಿಗೆಗಳನ್ನು ಉಲ್ಲೇಖಿಸಿ ಮಾತನಾಡಿದ ಎನ್‌ಸಿಪಿ ಮುಖಂಡ ಶರದ್‌ ಪವಾರ್, ’ಸ್ವಾಭಿಮಾನ, ಆತ್ಮಗೌರವವಿರುವರು ಯಾರೂ ಆ ಹುದ್ದೆಯಲ್ಲಿ (ರಾಜ್ಯಪಾಲ) ಮುಂದುವರಿಯುತ್ತಿರಲಿಲ್ಲ’ ಎಂದು ಹೇಳಿದರು.

ದೇವಾಲಯಗಳನ್ನು ತೆರೆಯ ವಿಚಾರದಲ್ಲಿ ರಾಜ್ಯಪಾಲರು, ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ’ಶಿವಸೇನಾ ಇದ್ದಕ್ಕಿದ್ದಂತೆ ಜಾತ್ಯತೀತವಾಗಿ ಬದಲಾಯಿತಾ’ ಎಂದು ಉಲ್ಲೇಖಿಸಿದ್ದರು. ಈ ಬೆಳವಣಿಗೆ ನಂತರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ರಾಜ್ಯಪಾಲರು ಪತ್ರದಲ್ಲಿ ಬಳಸಿದ ಭಾಷೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

’ಪತ್ರದಲ್ಲಿ ಬಳಸಿರುವ ಭಾಷೆ ಬಗ್ಗೆಕೇಂದ್ರ ಸಚಿವರು ಅಸಮಾಧಾನ ವ್ಯಕ್ತಪಡಿಸಿದ ನಂತರ ಸ್ವಾಭಿಮಾನಿ ಇರುವ ಯಾರೂ ಈ ಹುದ್ದೆಯಲ್ಲಿ ಮುಂದುವರಿಯಬೇಕೇ, ಬೇಡವೇ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದರು’ ಎಂದು ಶರದ್‌ಪವಾರ್, ಭಗತ್‌ಸಿಂಗ್ ಅವರ ಹೆಸರು ಪ್ರಸ್ತಾಪಿಸಿದೇ ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಉಸ್ಮಾನಾಬಾದ್‌ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಪತ್ರದಲ್ಲಿ ಕೆಲವು ಪದಗಳ ಬಳಕೆಯನ್ನು ತಪ್ಪಿಸಬಹುದಿತ್ತು ಎಂದು ಅಮಿತ್‌ ಶಾ ಹೇಳಿದ್ದಾರೆ. ಇಂಥ ಹೇಳಿಕೆ ನಂತರವೂ ಸ್ವಾಭಿಮಾನ ಇರುವ ಯಾವ ವ್ಯಕ್ತಿಯೂ ಆ ಹುದ್ದೆಯಲ್ಲಿ ಮುಂದುವರಿಯುತ್ತಿರಲಿಲ್ಲ’ ಎಂದು ಪುನರುಚ್ಛರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.