ನವದೆಹಲಿ: 2ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಸಲ್ಲಿಸಲು ವಿಳಂಬ ಮಾಡಿದ ಇಬ್ಬರಿಗೆ ಮತ್ತು ಮೂರು ಕಂಪನಿಗಳಿಗೆ ಒಟ್ಟು 16 ಸಾವಿರ ಸಸಿಗಳನ್ನು ದಂಡದ ರೂಪದಲ್ಲಿ ನೆಡುವಂತೆ ದೆಹಲಿ ಹೈಕೋರ್ಟ್ ಅಪರೂಪದ ಆದೇಶ ನೀಡಿದೆ.
2ಜಿ ಹಗರಣದಲ್ಲಿ ದೋಷಮುಕ್ತವಾಗಿರುವುದನ್ನು ಪ್ರಶ್ನಿಸಿಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಹೆಚ್ಚಿನ ಸಮಯ ಕೋರಿದ್ದರಿಂದ ನ್ಯಾಯಾಲಯ ಈ ಆದೇಶ ನೀಡಿದೆ.
ಸ್ವಾನ್ ಟೆಲಿಕಾಂ ಪ್ರೊಮೊಟರ್ (ಎಸ್ಟಿಪಿಎಲ್)ಶಹೀದ್ ಉಸ್ಮಾನ್ ಬಲ್ವಾ, ಕುಸೆಗಾಂವ್ ಫ್ರೂಟ್ಸ್ ಆ್ಯಂಡ್ ವೆಜಿಟೇಬಲ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ರಾಜೀವ್ ಅಗರವಾಲ್ ಮತ್ತು ಕಂಪನಿಗಳಾದ ಡೈನಾಮಿಕ ರಿಯಾಲ್ಟಿ, ಡಿ.ಬಿ. ರಿಯಾಲ್ಟಿಲಿಮಿಟೆಡ್ ಮತ್ತು ನಿಹಾರ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ಗೆ ಹಸಿರೀಕರಣ ಕಾರ್ಯ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿದೆ.
ಪ್ರತಿಕ್ರಿಯೆ ಸಲ್ಲಿಸಲು ಕೊನೆಯ ಅವಕಾಶ ನೀಡುವುದಾಗಿ ನ್ಯಾಯಾಲಯ ಇದೇ ಸಂದರ್ಭದಲ್ಲಿಎಚ್ಚರಿಕೆ ನೀಡಿದೆ. ಈ ಬಗ್ಗೆ 2018ರ ಅಕ್ಟೋಬರ್ನಲ್ಲಿ ನಿರ್ದೇಶನ ನೀಡಿದ್ದರೂ ಇನ್ನೂ ಪ್ರತಿಕ್ರಿಯೆ ಸಲ್ಲಿಸಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಸಿಬಿಐ ದಾಖಲಿಸಿರುವ ಪ್ರಕರಣದಲ್ಲೂ ಪ್ರತಿಕ್ರಿಯೆ ಸಲ್ಲಿಸಲುಕೊನೆಯ ಅವಕಾಶ ನೀಡುವುದಾಗಿ ಎ. ರಾಜಾ ಆಪ್ತ ಕಾರ್ಯದರ್ಶಿ ಆರ್.ಕೆ. ಚಂದೋಲಿಯಾ, ಕುಸೆಗಾಂವ್ ಫ್ರೂಟ್ಸ್ ಕಂಪನಿಯ ನಿರ್ದೇಶಕರಾದ ಅಸೀಫ್ ಬಲ್ವಾಮತ್ತು ಅಗರವಾಲ್ ಅವರಿಗೆ ಹೈಕೋರ್ಟ್ ತಿಳಿಸಿತು. ಇವರು ಸಹ ಸಸಿಗಳನ್ನು ನೆಡಬೇಕು ಎಂದಿದೆ.
ದೆಹಲಿಯ ದಕ್ಷಿಣ ಅರಣ್ಯ ಪ್ರದೇಶದಲ್ಲಿ ಸಸಿಗಳನ್ನು ನೆಡುವಂತೆ ನ್ಯಾಯಮೂರ್ತಿ ನಜ್ಮಿ ವಾಝಿರಿ ಆದೇಶಿಸಿದರು. ಸಸಿಗಳನ್ನು ನೆಡಲು ಎಲ್ಲರೂ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಮುಂದೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದು, ಮಳೆಗಾಲದವರೆಗೆ ನಿರ್ವಹಣೆಯನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ.
‘ವಿವಿಧ ಪ್ರಕರಣಗಳಲ್ಲಿ 39 ಸಾವಿರ ಸಸಿಗಳನ್ನು ನೆಡುವಂತೆ ಅರ್ಜಿದಾರರಿಗೆ ಸೂಚಿಸಿದ್ದೇನೆ’ ಎಂದು ನ್ಯಾಯಮೂರ್ತಿ ನಜ್ಮಿ ವಾಝಿರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.