ನವದೆಹಲಿ: ಜಮ್ಮುವಿನಲ್ಲಿ ಅಕ್ರಮವಾಗಿ ಬಂಧಿಸಿಟ್ಟಿರುವ ಸುಮಾರು 150ರಿಂದ 170 ಮಂದಿ ರೋಹಿಂಗ್ಯಾ ಸಮುದಾಯದವರನ್ನು ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ರೋಹಿಂಗ್ಯಾ ಸಮುದಾಯದವರಿಗೆ ಆಶ್ರಯ ನೀಡಿದ್ದ ಮೊಹಮ್ಮದ್ ಸಲೀಮುಲ್ಲಾ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದಾರೆ. ರಾಯಭಾರ ಕಚೇರಿಯ ಪರಿಶೀಲನೆಯ ನಂತರ ಈ ಜನರು ಮ್ಯಾನ್ಮಾರ್ಗೆ ಗಡೀಪಾರು ಆಗುವ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಜಮ್ಮುವಿನಲ್ಲಿ ಮಾತ್ರವಲ್ಲದೆ ದೇಶದಾದ್ಯಂತದರೋಹಿಂಗ್ಯಾ ನಿರಾಶ್ರಿತರಿಗೆ ನಿರಾಶ್ರಿತರ ಕಾರ್ಡ್ ನೀಡಿ, ಶಿಬಿರಗಳಲ್ಲಿ ಆಶ್ರಯ ನೀಡಿ ರಕ್ಷಣೆ ಮಾಡುವಂತೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಕೂಡ (ಯುಎನ್ಎಚ್ಸಿಆರ್) ನಿರ್ದೇಶನ ನೀಡಿದ್ದಾರೆ ಎನ್ನುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ರೋಹಿಂಗ್ಯಾ ನಿರಾಶ್ರಿತರ ಬಯೋಮೆಟ್ರಿಕ್ ಪರಿಶೀಲನೆಗೆಜಮ್ಮು ಮತ್ತು ಕಾಶ್ಮೀರ ಆಡಳಿತವು ಕೈಗೊಂಡ ಕ್ರಮದ ನಂತರವೂ ಕೆಲವು ರೋಹಿಂಗ್ಯಾಗಳು ನಿರಾಶ್ರಿತರ ಶಿಬಿರಗಳಿಗೆ ಹಿಂತಿರುಗಲಿಲ್ಲ. ಹಾಗಾಗಿ ಅವರನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ ಎನ್ನುವ ಗೊಂದಲದ ಮಾಹಿತಿ ರೋಹಿಂಗ್ಯಾ ಕುಟುಂಬಗಳಿಂದ ಬಂದಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಜಮ್ಮುವಿನಲ್ಲಿ ರೋಹಿಂಗ್ಯಾ ನಿರಾಶ್ರಿತರ ಪರಿಸ್ಥಿತಿ ಅನಿಶ್ಚಿತವಾಗಿದೆ. ಅವರಿಗೆ ನೀಡಲಾದ ಯುಎನ್ಎಚ್ಸಿಆರ್ ನಿರಾಶ್ರಿತರ ಕಾರ್ಡ್ಗಳು ಸರಿಯಾಗಿಲ್ಲ ಎಂದು ಸರ್ಕಾರವೂ ಪದೇ ಪದೇ ಹೇಳುತ್ತಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.