ADVERTISEMENT

ಕಿಸಾನ್ ಸಮ್ಮಾನ್ ಯೋಜನೆ: ಮೊದಲ ಕಂತಿಗೆ ಆಧಾರ್‌ ಬೇಕಿಲ್ಲ

ಎರಡನೇ ಕಂತಿಗೆ ಆಧಾರ್ ಕಡ್ಡಾಯ; ರೈತರಿಗೆ ವರ್ಷಕ್ಕೆ ₹6,000 ಧನಸಹಾಯ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 20:00 IST
Last Updated 4 ಫೆಬ್ರುವರಿ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಮೊದಲ ಕಂತು ₹2,000 ಪಡೆಯುವ ರೈತರಿಗೆ ಆಧಾರ್ ಐಚ್ಛಿಕವಾಗಿದ್ದು, ಎರಡನೇ ಕಂತು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯ.

ಮೊದಲ ಕಂತಿಗೆ ವಿನಾಯಿತಿ ಇದ್ದು, ಮುಂಬರುವ ಕಂತುಗಳ ಹಣ ಪಡೆಯಲು ರೈತರು ಆಧಾರ್ ಸಂಖ್ಯೆ ಮೂಲಕ ತಮ್ಮ ಗುರುತು ಖಚಿತಪಡಿಸಬೇಕಿದೆ.

2 ಹೆಕ್ಟೇರ್‌ ಜಮೀನು ಹೊಂದಿರುವ ಸುಮಾರು 12 ಕೋಟಿ ರೈತರಿಗೆ ವರ್ಷಕ್ಕೆ ₹6,000 ಧನಸಹಾಯ ನೀಡುವ ಹೊಸ ಯೋಜನೆಯನ್ನು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರು ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ್ದರು. ಇದೇ ವರ್ಷದಿಂದ ಯೋಜನೆ ಜಾರಿಯಾಗಲಿದ್ದು, ಮಾರ್ಚ್ ತಿಂಗಳಲ್ಲಿ ರೈತರ ಖಾತೆಗಳಿಗೆ ಮೊದಲ ಕಂತು ವರ್ಗಾವಣೆಯಾಗಲಿದೆ.

ADVERTISEMENT

ಡಿಸೆಂಬರ್ 2018–ಮಾರ್ಚ್ 2019 ಅವಧಿಯ ಆರಂಭದ ಕಂತಿಗಾಗಿ ಆಧಾರ್ ಸಂಗ್ರಹಿಸಲಾಗುತ್ತಿದೆ. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದವರು ಪರ್ಯಾಯವಾಗಿ ವಾಹನ ಚಾಲನಾ ಪರವಾನಗಿ, ಚುನಾವಣಾ ಗುರುತಿನ ಚೀಟಿ, ನರೇಗಾ ಜಾಬ್‌ಕಾರ್ಡ್, ಅಥವಾ ಕೇಂದ್ರ/ಸರ್ಕಾರ ಸರ್ಕಾರಗಳು ನೀಡಿರುವ ಯಾವುದಾದರೂ ಅಧಿಕೃತ ದಾಖಲೆಗಳನ್ನು ಒದಗಿಸುವುದು ಅಗತ್ಯ.

ಈ ಸಂಬಂಧ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಕೃಷಿ ಸಚಿವಾಲಯ, ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅವರ ಆಧಾರ್ ಸಂಖ್ಯೆ ಸಂಗ್ರಹಿಸುವುದು ಅಗತ್ಯ ಎಂದು ತಿಳಿಸಿದೆ.

ಏನೇನು ಮಾಹಿತಿ?

ಎರಡು ಹೆಕ್ಟೇರ್ ಜಮೀನು ಹೊಂದಿರುವ ರೈತನ ಹೆಸರು, ಲಿಂಗ, ಸಮುದಾಯ (ಎಸ್‌ಸಿ/ಎಸ್ಟಿ), ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ ಹೊಂದಿರುವ ಡೇಟಾಬೇಸ್ ತಯಾರಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ.

ಫಲಾನುಭವಿಗಳು ಯಾರು?

* ಅರ್ಹ ಫಲಾನುಭವಿ ಎಂದರೆ, ಗಂಡ, ಹೆಂಡತಿ, 18 ವರ್ಷದೊಳಗಿನ ಮಗ/ಮಗಳು ಇರುವ ಕುಟುಂಬಕ್ಕೆ ಸಾಗುವಳಿ ಮಾಡುವ ಎರಡು ಹೆಕ್ಟೇರ್ ಜಮೀನು ಇರಬೇಕು ಎಂದು ಕೇಂದ್ರದ ಮಾರ್ಗಸೂಚಿ ತಿಳಿಸಿದೆ.

* ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಯ ಜಾರಿಯಲ್ಲಿರುವ ಭೂಒಡೆತನ ವ್ಯವಸ್ಥೆಯನ್ನು ಬಳಸಿಕೊಂಡು ಫಲಾನುಭವಿಗಳನ್ನು ಸರ್ಕಾರ ಗುರುತಿಸಲಿದೆ.

* 1 ಫೆಬ್ರುವರಿ 2019ಕ್ಕಿಂತ ಮೊದಲು ಭೂ ದಾಖಲೆಗಳಲ್ಲಿ ಹೆಸರ ಇರುವ ಹಿಡುವಳಿದಾರರನ್ನು ಮಾತ್ರ ಪರಿಗಣಿಸಲಾಗುತ್ತದೆ. ಫೆ.1ರ ಬಳಿಕ ಬದಲಾವಣೆ ಮಾಡಲಾದ ಭೂ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ. ಐದು ವರ್ಷದ ಬಳಿಕ ಹೊಸ ಹಿಡುವಳಿದಾರರ ಪರಿಗಣನೆ.

* ಸಾಗುವಳಿ ಜಮೀನಿನ ಒಡೆತನವು ಉತ್ತರಾಧಿಕತ್ವದ ಮೂಲಕ ಮಾಲೀಕತ್ವವರ್ಗಾವಣೆಗೆ ಒಳಪಟ್ಟಿದ್ದರೆ, ಅಂತಹವರಿಗೆ ಯೋಜನೆಯ ನೆರವು ಸಿಗಲಿದೆ.

* ಒಂದು ವೇಳೆ ಕುಟುಂಬವೊಂದಕ್ಕೆ ಸೇರಿದ ಜಮೀನು ವಿವಿಧ ಗ್ರಾಮಗಳು ಅಥವಾ ಕಂದಾಯ ದಾಖಲೆಗಳಲ್ಲಿ ಹಂಚಿಹೋಗಿದ್ದರೆ, ಅವೆಲ್ಲವನ್ನೂ ಒಟ್ಟುಗೂಡಿಸಿ ಫಲಾನುಭವಿ ಆಯ್ಕೆಗೆ ಪರಿಗಣಿಸಲಾಗುತ್ತದೆ.

* ಈಶಾನ್ಯ ರಾಜ್ಯಗಳಲ್ಲಿ ಸಮುದಾಯ ಆಧರಿತ ಜಮೀನು ಒಡೆತನ ಇದ್ದಲ್ಲಿ, ಫಲಾನುಭವಿ ಆಯ್ಕೆಗೆ ಪ್ರತ್ಯೇಕ ಮಾನದಂಡ ಅನುಸರಿಸಲಾಗುತ್ತದೆ.

* ಜಿಲ್ಲಾಮಟ್ಟದ ಕುಂದುಕೊರತೆ ಪರಿಹಾರ ಸಮಿತಿಗಳನ್ನು ಆಯ್ಕೆ ಮಾಡುವಂತೆ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ. ಯೋಜನೆ ಸಂಬಂಧ ಸಮಸ್ಯೆಗಳಿಗೆ ಈ ಸಮಿತಿಗಳು ಪರಿಹಾರ ಒದಗಿಸಲಿವೆ.

* ಯೋಜನೆಯ ಕಣ್ಗಾವಲಿ ಸಮಿತಿಯುನ್ನು ಕೇಂದ್ರ ಸರ್ಕಾರ ಸದ್ಯದಲ್ಲೇ ರಚಿಸಲಿದ್ದು, ಅಲ್ಲಿಯವರೆಗೆ ಯೋಜನೆ ಅನುಷ್ಠಾನಕ್ಕೆ ಆಯಾ ರಾಜ್ಯ ಸರ್ಕಾರಗಳೇ ನೋಡಲ್ ಇಲಾಖೆಯ ರೀತಿ ಕೆಲಸ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.