ADVERTISEMENT

ಪುದುಚೇರಿ ಅಭಿವೃದ್ಧಿಗೆ ಕೇಂದ್ರದ ನೆರವು: ಮೋದಿ ಭರವಸೆ

ಹಲವು ಯೋಜನೆಗಳ ಉದ್ಘಾಟನೆ, ವಿವಿಧ ಕಾಮಗಾರಿಗೆ ಭೂಮಿಪೂಜೆ

ಪಿಟಿಐ
Published 25 ಫೆಬ್ರುವರಿ 2021, 10:46 IST
Last Updated 25 ಫೆಬ್ರುವರಿ 2021, 10:46 IST
ಪುದುಚೇರಿಯಲ್ಲಿ ಗುರುವಾರ ನಡೆದ ಬಹಿರಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು –ಪಿಟಿಐ ಚಿತ್ರ
ಪುದುಚೇರಿಯಲ್ಲಿ ಗುರುವಾರ ನಡೆದ ಬಹಿರಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು –ಪಿಟಿಐ ಚಿತ್ರ   

ಪುದುಚೇರಿ (ಪಿಟಿಐ): ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೆರವು ನೀಡುವುದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.

ಪೂರ್ಣಗೊಂಡ ವಿವಿಧ ಯೋಜನೆಗಳ ಉದ್ಘಾಟನೆ, ಹಲವು ಯೋಜನೆಗಳಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ನಂತರ ಅವರು ಮಾತನಾಡಿದರು.

‘ದೇಶದ ಅಭಿವೃದ್ಧಿಗೆ ಉತ್ತಮ ರಸ್ತೆ ಸೇರಿದಂತೆ ಸಂಪರ್ಕ ಜಾಲ ಅಗತ್ಯ. ಉತ್ತಮ ಸಂಪರ್ಕ ರಸ್ತೆಗಳ ನಿರ್ಮಾಣದಿಂದ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯೂ ಲಭಿಸುತ್ತದೆ’ ಎಂದರು.

ADVERTISEMENT

ರಾಷ್ಟ್ರೀಯ ಹೆದ್ದಾರಿ 45ಎ ಪೈಕಿ ಸತ್ಯನಾಥಪುರಂ–ನಾಗಪಟ್ಟಿನಂ ನಡುವಿನ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗೆ ಉತ್ತೇಜನ ಸಿಗಲಿದೆ ಎಂದರು.

‘ಪುದುಚೇರಿ ಅಗಾಧ ಮಾನವ ಸಂಪನ್ಮೂಲ ಹೊಂದಿದೆ. ಪ್ರವಾಸೋದ್ಯಮಕ್ಕೂ ಇಲ್ಲಿ ವಿಪುಲ ಅವಕಾಶಗಳಿವೆ. ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವುದರಿಂದ ಉದ್ಯಮಗಳು ಬೆಳೆಯುತ್ತವೆ. ಉದ್ಯೋಗಾವಕಾಶಗಳು ಹೆಚ್ಚಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಹುಲ್ ವಿರುದ್ಧ ವಾಗ್ದಾಳಿ

‘ದೇಶವನ್ನಾಗಳಿದ ಬ್ರಿಟಿಷರು ವಿಭಜಿಸಿ ಆಳುವ ನೀತಿ ಅನುಸರಿಸುತ್ತಿದ್ದರು. ಈಗಿನ ಕಾಂಗ್ರೆಸ್‌ ಜನರನ್ನು ವಿಭಜಿಸಿ, ಸುಳ್ಳು ಹೇಳಿ, ಆಡಳಿತ ನಡೆಸುವ ನೀತಿಯನ್ನು ಅನುಸರಿಸುತ್ತಿದೆ’ ಎಂದು ಪ್ರಧಾನಿ ಮೋದಿ ಟೀಕಿಸಿದರು.

ಚುನಾವಣೆ ಹೊಸ್ತಿಲಲ್ಲಿರುವ ಪುದುಚೇರಿಯಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ನ ಕೆಲವು ಮುಖಂಡರು ಒಂದು ಪ್ರದೇಶದ ವಿರುದ್ಧ ಮತ್ತೊಂದು ಪ್ರದೇಶವನ್ನು, ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ್ದ ರಾಹುಲ್‌ ಗಾಂಧಿ, ‘ಉತ್ತರ ಭಾರತದಲ್ಲಿ ಬೇರೆ ರೀತಿಯ ರಾಜಕಾರಣದಲ್ಲಿ ತೊಡಗಿರುವ ನನಗೆ, ದಕ್ಷಿಣದಲ್ಲಿನ ರಾಜಕಾರಣ ಚೇತೋಹಾರಿ ಎನಿಸುತ್ತದೆ’ ಎಂದು ಹೇಳಿದ್ದರು.

‘ಮೀನುಗಾರಿಕೆಗೆ ಸಂಬಂಧಿಸಿ ಕೇಂದ್ರದಲ್ಲಿ ಪ್ರತ್ಯೇಕ ಸಚಿವಾಲಯವನ್ನು 2019ರಲ್ಲಿ ಎನ್‌ಡಿಎ ಸರ್ಕಾರ ರಚಿಸಿತು. ಅಲ್ಲಿಯವರೆಗೂ ಇಂಥ ಸಚಿವಾಲಯವೇ ಇರಲಿಲ್ಲ ಎಂದರೆ ಅಚ್ಚರಿ ಎನಿಸುತ್ತದೆ’ ಎನ್ನುವ ಮೂಲಕ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಪುದುಚೇರಿ ಮುಖ್ಯಮಂತ್ರಿಯಾಗಿದ್ದ ವಿ.ನಾರಾಯಣಸ್ವಾಮಿ ಅವರ ಆದ್ಯತೆಗಳೇ ಬೇರೆ ಇದ್ದವು. ಅವರು ಜನರ ಕಲ್ಯಾಣವನ್ನು ನಿರ್ಲಕ್ಷಿಸಿದ್ದರು ಎಂದೂ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.