ADVERTISEMENT

ಮೋದಿ ಸುಳ್ಳಿನ ಸರದಾರ: ಖರ್ಗೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 19:46 IST
Last Updated 27 ನವೆಂಬರ್ 2022, 19:46 IST
   

ಡೆಡಿಯಾಪಾಡಾ (ಗುಜರಾತ್) :ಮೋದಿ ಸುಳ್ಳಿನ ಸರದಾರ. ಅವರು ತಮ್ಮ ಬಗ್ಗೆ ಅನುಕಂಪ ಹುಟ್ಟಿಸಿಕೊಳ್ಳಲು ಸದಾ ಸುಳ್ಳು ಹೇಳುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಅವರು ಇಲ್ಲಿ ಪ್ರಚಾರ ನಡೆಸಿದರು. ಈ ವೇಳೆ, ‘ಮೋದಿ ಅವರು ತಾನು ಬಡವರಲ್ಲೇ ಅತಿಬಡವ ಮತ್ತು ಅಸ್ಪೃಶ್ಯ ಎಂದು ಹೇಳಿಕೊಂಡಿದ್ದಾರೆ. ಮೋದಿ ಅವರೇ, ಜನರು ಕನಿಷ್ಠ ನೀವು ಕೊಡುವ ಚಹಾವನ್ನಾದರೂ ಕುಡಿಯುತ್ತಾರೆ. ನಾನು ಕೊಟ್ಟರೆ ಚಹಾ ಸಹ ಕುಡಿಯುವುದಿಲ್ಲ. ಆದರೆ, ತಾನು ಅಸ್ಪೃಶ್ಯ ಎಂದು ನೀವು ಹೇಳಿಕೊಳ್ಳುತ್ತಿರುವುದು ಏಕೆ’ ಎಂದು
ಪ್ರಶ್ನಿಸಿದ್ದಾರೆ.

‘ಮೋದಿ ಅವರೇ ನೀವು ಸದಾ, ನಾನು ಬಡವ. ನನ್ನನ್ನು ಎಲ್ಲರೂ ಬೈಯುತ್ತಾರೆ, ತುಳಿಯುತ್ತಾರೆ ಎಂದು ಹೇಳುತ್ತೀರಿ. ಆ ಮೂಲಕ ಅನುಕಂಪ ಗಿಟ್ಟಿಸಲು ಯತ್ನಿಸುತ್ತೀರಿ. ಇದನ್ನೆಲ್ಲಾ ಅರ್ಥಮಾಡಿಕೊಳ್ಳುವಷ್ಟು ಜನರು ಬುದ್ಧಿವಂತರಾಗಿದ್ದಾರೆ, ಅವರು ಮೂರ್ಖರಲ್ಲ. ನೀವು ಎಷ್ಟು ಸುಳ್ಳು ಹೇಳುತ್ತೀರಿ? ಒಂದರ ನಂತರ ಒಂದು ಸುಳ್ಳು. ನೀವು ಸುಳ್ಳಿನ ಸರದಾರ’ ಎಂದು ಖರ್ಗೆ ಟೀಕಿಸಿದ್ದಾರೆ.

ADVERTISEMENT

‘ದೇಶವನ್ನು ಕಾಂಗ್ರೆಸ್‌ ಲೂಟಿ ಮಾಡಿದೆ, ಅಭಿವೃದ್ಧಿ ಮಾಡಿಲ್ಲ ಎಂದು ಸುಳ್ಳು ಹೇಳುತ್ತೀರಿ. ಈ ರಾಜ್ಯದ ನೆಲ, ಜಲ ಮತ್ತು ಕಾಡನ್ನು ಮಾರಾಟ ಮಾಡುತ್ತಿರುವವರು ಯಾರು? ನೀವು ಮತ್ತು ನಿಮ್ಮ ಶ್ರೀಮಂತ ಗೆಳೆಯರು ಜನರನ್ನು ಲೂಟಿ ಮಾಡುತ್ತಿದ್ದೀರಿ’ ಎಂದು ಖರ್ಗೆ ಆರೋಪಿಸಿದ್ದಾರೆ.

ನುಡಿ–ಕಿಡಿ

ಭಯೋತ್ಪಾದನಾ ಕೃತ್ಯಗಳನ್ನೂ ಕಾಂಗ್ರೆಸ್‌ ಮತಬ್ಯಾಂಕ್‌ನ ಕನ್ನಡಕದಿಂದ ನೋಡುತ್ತದೆ. ಕಾಂಗ್ರೆಸ್‌ ಮಾತ್ರವಲ್ಲ, ಅದೇ ರೀತಿ ಯೋಚನೆ ಮಾಡುವ ಪಕ್ಷಗಳೆಲ್ಲವೂ ದೊಡ್ಡ–ದೊಡ್ಡ ಭಯೋತ್ಪಾದನಾ ಕೃತ್ಯಗಳ ಬಗ್ಗೆ ಬಾಯಿ ಬಿಡುವುದೇ ಇಲ್ಲ. ಮಾತನಾಡಿದರೆ ತಮ್ಮ ಮತಬ್ಯಾಂಕ್‌ಗಳಿಗೆ ಎಲ್ಲಿ ಧಕ್ಕೆಯಾಗಿಬಿಡುತ್ತದೋ ಎಂದು ಯೋಚಿಸುತ್ತವೆ. ಈ ಎಲ್ಲಾ ಪಕ್ಷಗಳು ಭಯೋತ್ಪಾದನೆಯನ್ನು ತಮ್ಮ ಯಶಸ್ಸಿಗೆ ಹತ್ತಿರದ ದಾರಿ ಎಂದು ಭಾವಿಸಿವೆ

ನರೇಂದ್ರ ಮೋದಿ, ಪ್ರಧಾನಿ

–––

ದೇಶದಲ್ಲಿ ಈವರೆಗೆ ಐದಾರು ಪಕ್ಷಗಳು ಕೇಂದ್ರದಲ್ಲಿ ಸರ್ಕಾರವನ್ನು ರಚಿಸಿವೆ. ಆದರೆ, ಬಿಜೆಪಿಯಂತಹ ನಿರುಂಕುಶಾಧಿಕಾರಿ ಮತ್ತೊಂದು ಪಕ್ಷ ಭಾರತದಲ್ಲಿಲ್ಲ

ಜಿಗ್ನೇಶ್ ಮೆವಾನಿ, ಗುಜರಾತ್ ಕಾಂಗ್ರೆಸ್‌ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.