ADVERTISEMENT

ಶ್ರೀಮದ್ ವಿದ್ಯಾಧಿರಾಜ ಸ್ವಾಮೀಜಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ 

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 17:30 IST
Last Updated 19 ಜುಲೈ 2021, 17:30 IST
   

ನವದೆಹಲಿ: ಗೋವಾದ ಕಾಣಕೋಣ ಸಮೀಪದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಪರ್ತಗಾಳಿ ಜೀವೋತ್ತಮ ಮಠಾಧೀಶ ಎಚ್‌.ಎಚ್. ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ನಿಧನವು ಅತೀವ ದುಃಖ ತಂದಿದೆ. ಅವರ ಸಮಾಜ ಸೇವೆಯಿಂದಾಗಿ ಸದಾಕಾಲ ನೆನಪಿನಲ್ಲಿ ಉಳಿಯುತ್ತಾರೆ. ಅದರಲ್ಲೂ ಆರೋಗ್ಯ ಕ್ಷೇತ್ರಕ್ಕೆ ಅವರ ಸೇವೆ ಅಪಾರವಾದುದು. ಅವರ ಅಸಂಖ್ಯಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಪರ್ತಗಾಳೀ ಜೀವೋತ್ತಮ ಮಠವು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪೀಠಗಳಲ್ಲಿ ಪ್ರಮುಖವಾದುದಾಗಿದೆ. ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಜನಿಸಿದ ಅವರ ಪೂರ್ವಾಶ್ರಮದ ಹೆಸರು ರಾಘವೇಂದ್ರಾಚಾರ್ಯ. ದ್ವಾರಕಾನಾಥ ತೀರ್ಥ ಸ್ವಾಮೀಜಿ ಅವರಿಂದ 1967ರ ಫೆಬ್ರುವರಿ 26ರಂದು ಸನ್ಯಾಸ ದೀಕ್ಷೆ ಸ್ವೀಕರಿಸಿ, 1973ರ ಏಪ್ರಿಲ್ 5ರಂದು ಮಠಾಧೀಶರಾದರು. 50ಕ್ಕೂ ಅಧಿಕ ಚಾತುರ್ಮಾಸ್ಯಗಳನ್ನು ಆಚರಿಸಿದ ಹೆಗ್ಗಳಿಗೆ ಅವರದ್ದಾಗಿದೆ.

ADVERTISEMENT

2017ರಲ್ಲಿ ಉದಯಭಟ್ ಶರ್ಮ ಎಂಬ ವಟುವಿಗೆ ವಿದ್ಯಾಧೀಶ ತೀರ್ಥ ಎಂಬ ನಾಮಕರಣ ಮಾಡಿ ಸನ್ಯಾನ ದೀಕ್ಷೆ ನೀಡಿ ಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದರು. ಸ್ವಾಮೀಜಿ, ಜೀವೋತ್ತಮ ಮಠದ ಈ ಹಿಂದಿನ ಪೀಠಾಧಿಪತಿಗಳ ಬಗ್ಗೆ ಗ್ರಂಥವನ್ನು ಪ್ರಕಟಿಸಿದ್ದಾರೆ. ಶಾಖಾಮಠಗಳ ಜೀರ್ಣೋದ್ಧಾರ, ಮೂಲಮಠದ ನವೀಕರಣ, ದೇವಸ್ಥಾನಗಳ ನಿರ್ಮಾಣ, ದೇಶದ ವಿವಿಧೆಡೆ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಂಡು ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.