ನವದೆಹಲಿ: ಕಳೆದ 11 ವರ್ಷಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದೆ. ಇದರಿಂದಾಗಿ ಪ್ರತಿಯೊಂದು ಕ್ಷೇತ್ರದ ಬಲವರ್ಧನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರತಿಪಾದಿಸಿದ್ದಾರೆ.
‘ರೋಜಗಾರ್ ಮೇಳ’ದ ಭಾಗವಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ 51 ಸಾವಿರ ಮಂದಿಗೆ ನೇಮಕಾತಿ ಪತ್ರವನ್ನು ಪ್ರಧಾನಿ ವಿತರಿಸಿದರು. ಈ ವೇಳೆ ಉದ್ಯೋಗ ಸೃಷ್ಟಿ ಹಾಗೂ ಬಡತನ ನಿರ್ಮೂಲನೆಗಾಗಿ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾತನಾಡಿದರು.
ಇತ್ತೀಚೆಗೆ ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದರ ಬಗ್ಗೆಯೂ ಮಾತನಾಡಿ, ‘ಭಾರತವು ಯುವಶಕ್ತಿ ಹಾಗೂ ಪ್ರಜಾಪ್ರಭುತ್ವ ಎಂಬ ಎರಡು ಅನಂತ ಶಕ್ತಿಗಳನ್ನು ಹೊಂದಿದೆ ಎಂಬುದನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಪ್ರವಾಸದ ವೇಳೆ ವಿವಿಧ ದೇಶಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳು ಭಾರತದ ಯುವಜನತೆಗೆ ಉತ್ಪಾದನಾ ಹಾಗೂ ಸೇವಾ ವಲಯಗಳಲ್ಲಿ ವಿಪುಲ ಅವಕಾಶಗಳನ್ನು ಸೃಷ್ಟಿಸಲಿದೆ’ ಎಂದೂ ಹೇಳಿದ್ದಾರೆ.
* ಉದ್ಯೋಗ ಸೃಷ್ಟಿಯ ಮೂಲಕ 10 ವರ್ಷದಲ್ಲಿ 25 ಕೋಟಿ ಮಂದಿಯನ್ನು ಬಡತನದಿಂದ ಹೊರಗೆ ತರಲಾಗಿದೆ
* ಕಳೆದೊಂದು ದಶಕದಲ್ಲಿ 90 ಕೋಟಿ ಮಂದಿ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳಾಗಿದ್ದಾರೆ
* ಉತ್ಪಾದನಾ ಕ್ಷೇತ್ರಕ್ಕೆ ನೀಡಿದ ಉತ್ತೇಜನ ಫಲ ನೀಡಿದೆ. 11 ವರ್ಷಗಳಲ್ಲಿ ಉತ್ಪಾದನಾ ವಲಯದ ಮೌಲ್ಯ ₹11 ಲಕ್ಷ ಕೋಟಿಗೆ ಏರಿಕೆಯಾಗಿದೆ
* ಆಪರೇಷನ್ ಸಿಂಧೂರದ ಬಳಿಕ ರಕ್ಷಣಾ ಉತ್ಪಾದನಾ ಕ್ಷೇತ್ರವು ಎಲ್ಲರ ಗಮನ ಸೆಳೆದಿದೆ. ಈ ವಲಯದ ಮೌಲ್ಯ ₹1.25 ಲಕ್ಷ ಕೋಟಿಯ ಗಡಿದಾಟಿದೆ
* ಲೊಕೋಮೋಟಿವ್ ಉತ್ಪಾದನೆಯಲ್ಲಿ ಭಾರತ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ. ಆಟೋಮೊಬೈಲ್ ಕ್ಷೇತ್ರವು 5 ವರ್ಷದಲ್ಲಿ ₹3.43 ಲಕ್ಷ ಕೋಟಿ (40 ಬಿಲಿಯನ್ ಡಾಲರ್) ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.