ರಾಂಪಾಲ್ ಅವರಿಗೆ ಹೊಸ ಶೂ ನೀಡಿದ ಪ್ರಧಾನಿ ಮೋದಿ, ಶೂ ಹಾಕಲು ಅವರಿಗೆ ಸಹಾಯ ಮಾಡಿದ್ದಾರೆ.
(ಚಿತ್ರ ಕೃಪೆ– X/@narendramodi)
ಯಮುನಾನಗರ: ಹರಿಯಾಣದ ಯಮುನಾನಗರಕ್ಕೆ ಸೋಮವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಹುಕಾಲದ ಅಭಿಮಾನಿಯೊಬ್ಬರನ್ನು ಭೇಟಿಯಾಗಿದ್ದಾರೆ. ಅಲ್ಲದೇ ಆ ಅಭಿಮಾನಿಯ 14 ವರ್ಷಗಳ ಪ್ರತಿಜ್ಞೆಯನ್ನು ಈಡೇರಿಸಿದ್ದಾರೆ.
ಕೈತಾಲ್ನ ರಾಂಪಾಲ್ ಕಶ್ಯಪ್ ಎಂಬುವವರು 14 ವರ್ಷಗಳ ಹಿಂದೆ ಬಿಜೆಪಿಯ ಪ್ರಬಲ ವ್ಯಕ್ತಿ ಪ್ರಧಾನಿಯಾದ ನಂತರವೇ ಪಾದರಕ್ಷೆಗಳನ್ನು ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಅವರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ.
ಮೋದಿ ಅವರು ರಾಂಪಾಲ್ ಅವರೊಂದಿಗಿನ ಭೇಟಿಯ ವಿಡಿಯೊವನ್ನು 'ಎಕ್ಸ್'ನಲ್ಲಿ ಹಂಚಿಕೊಂಡಿದ್ದಾರೆ. ಭೇಟಿಯ ವೇಳೆ ರಾಂಪಾಲ್ ಅವರಿಗೆ ಹೊಸ ಶೂ ನೀಡಿದ ಪ್ರಧಾನಿ ಮೋದಿ, ಶೂ ಹಾಕಲು ಅವರಿಗೆ ಸಹಾಯ ಮಾಡಿದ್ದಾರೆ.
'ಯಮುನಾನಗರದಲ್ಲಿ ಸೋಮಾವಾರ ನಡೆದ ಸಾರ್ವಜನಿಕ ಸಭೆಯಲ್ಲಿ, ನಾನು ಕೈತಾಲ್ನ ರಾಂಪಾಲ್ ಕಶ್ಯಪ್ ಅವರನ್ನು ಭೇಟಿಯಾದೆ. ನಾನು ಪ್ರಧಾನಿಯಾದ ನಂತರ ಹಾಗೂ ನನ್ನನ್ನು ಭೇಟಿಯಾದ ನಂತರವೇ ಪಾದರಕ್ಷೆಗಳನ್ನು ಧರಿಸುವುದಾಗಿ 14 ವರ್ಷಗಳ ಹಿಂದೆ ಅವರು ಪ್ರತಿಜ್ಞೆ ಮಾಡಿದ್ದರು. ರಾಂಪಾಲ್ ಅವರಂತಹ ಜನರ ಪ್ರೀತಿಗೆ ನಾನು ಸದಾ ಆಭಾರಿ' ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.
'ರಾಂಪಾಲ್ ಅವರಂತಹ ಜನರ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ, ಅಂತಹ ಪ್ರತಿಜ್ಞೆ ಮಾಡುವ ಬದಲು ಅವರು ಸಾಮಾಜಿಕ ಕಾರ್ಯ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸ ಮಾಡಲು ಪ್ರತಿಜ್ಞೆ ಮಾಡಬೇಕು ಎಂದು ನಾನು ವಿನಂತಿಸುತ್ತೇನೆ' ಎಂದೂ ಮೋದಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ, ರಾಂಪಾಲ್ ಅವರು ಬಿಳಿ ಕುರ್ತಾ–ಪೈಜಾಮಾ ಧರಿಸಿದ್ದು, ಬರಿಗಾಲಿನಲ್ಲಿ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಮೋದಿ ಅವರನ್ನು ಹಸ್ತಲಾಘವದ ಮೂಲಕ ಸ್ವಾಗತಿಸಿದ್ದಾರೆ.
ಬಳಿಕ ಸೋಫಾದಲ್ಲಿ ಕುಳಿತುಕೊಂಡ ಪ್ರಧಾನಿ ಮೋದಿ ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. 'ಇಷ್ಟು ದಿನ ಯಾಕೆ ಸುಮ್ಮನಿದ್ದಿರಿ? ನೀವೇಕೆ ತೊಂದರೆ ತೆಗೆದುಕೊಳ್ಳಲು ಹೋದಿರಿ? ಎಂದಿದ್ದಾರೆ. ಅದಕ್ಕೆ ರಾಂಪಾಲ್, ನಾನು 14 ವರ್ಷಗಳಿಂದ ಬರಿಗಾಲಿನಲ್ಲಿದ್ದೆ' ಎಂದು ಉತ್ತರಿಸಿದ್ದಾರೆ.
ನಂತರ ಮೋದಿ ಅವರು, ಬೂದು ಬಣ್ಣದ ಸ್ಪೋರ್ಟ್ಸ್ ಶೂಗಳನ್ನು ಅವರಿಗೆ ನೀಡಿದ್ದಾರೆ. 'ಹೊಸ ಶೂ ಧರಿಸಲು ನಿಮಗೆ ಆರಾಮದಾಯಕವೆನಿಸುತ್ತಿದೆಯೇ ಎಂದು ಪ್ರಶ್ನಿಸಿದ ಪ್ರಧಾನಿ, ನಂತರ ಅವರ ಭುಜ ತಟ್ಟಿ, ನಿಯಮಿತವಾಗಿ ಶೂಗಳನ್ನು ಧರಿಸುತ್ತಲೇ ಇರಿ. ಭವಿಷ್ಯದಲ್ಲಿ ಈ ರೀತಿಯ ಪ್ರತಿಜ್ಞೆ ಮಾಡಬೇಡಿ' ಎಂದು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.