ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ಬೆಂಗಳೂರು: ಸಂಸತ್ ಅಧಿವೇಶನದಲ್ಲಿ ಇಂದು ರಾಜ್ಯಸಭೆಯ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಅವರು ತಮ್ಮ ಹರಿತ ಮಾತುಗಳಿಂದ ಕಾಂಗ್ರೆಸ್ ಹಾಗೂ ಅದರ ನಾಯಕ ರಾಹುಲ್ ಗಾಂಧಿಗೆ ತಿವಿದರು.
ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ಮಾತನಾಡಿದ ಮೋದಿ, ‘ಹಲವರು ನನ್ನ ಆರೋಗ್ಯದ ಗುಟ್ಟು ಏನೇಂದು ಕೇಳುತ್ತಾರೆ. ಈಗ ಹೇಳುತ್ತೇನೆ ಕೇಳಿ, ನಾನು ಪ್ರತಿದಿನ 2 ಕೆಜಿ ನಿಂದನೆಗಳನ್ನು ಸೇವಿಸುತ್ತೇನೆ‘ ಎಂದು ಕಾಂಗ್ರೆಸ್ ಕಾಲೆಳೆದರು. ಆಗ ಸದನ ನಗೆಗಡಲಲ್ಲಿ ತೇಲಿತು.
‘ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಎನ್ಡಿಎ ಸರ್ಕಾರ ಬರುವ ಮುಂಚೆ ದೇಶದ ಪರಿಸ್ಥಿತಿ ಹೇಗಿತ್ತು, ಈಗ ಹೇಗಿದೆ! ಎಂದು ಎದುರಾಳಿಗಳನ್ನು ಕೆಣಕಿದರು.
ಒಮ್ಮೆ ನೆಹರೂ ಅವರು ಇರಾನ್ಗೆ ಹೋಗಿದ್ದಾಗ ತಮ್ಮ ಮಗಳು ಇಂದಿರಾ ಅವರನ್ನೂ ಕರೆದುಕೊಂಡು ಹೋಗಿದ್ದರು. ಆಗ ಆ ದೇಶದಲ್ಲಿ ಮಾತನಾಡುವಾಗ ನಮ್ಮ ದೇಶದಲ್ಲಿ ಎಷ್ಟು ಸಮಸ್ಯೆಗಳಿವೆ ಎಂದರೆ, 35 ಕೋಟಿ ಸಮಸ್ಯೆ ಇವೆ ನೋಡಿ ಎಂದು ಹಗುರವಾಗಿ ಮಾತನಾಡಿದ್ದರು. ಇಂದಿರಾ ಗಾಂಧಿ ಅದಕ್ಕೆ ನಕ್ಕಿದ್ದರು ಎಂದು ಹಳೆ ಕಥೆ ಹೇಳಿದ ಮೋದಿ, ಆಗ ನಮ್ಮ ದೇಶದ ಜನಸಂಖ್ಯೆ 35 ಕೋಟಿ ಇತ್ತು. 35 ಕೋಟಿ ಜನರನ್ನೇ ಅವರು ದೊಡ್ಡ ಸಮಸ್ಯೆ ಎಂದಿದ್ದರು ಎಂದು ಮತ್ತೊಂದು ಬಾಣ ಬಿಟ್ಟರು.
ರಾಹುಲ್ ಗಾಂಧಿ ಉದ್ದೇಶಿಸಿ ಪದೇ ಪದೇ ಯುವರಾಜ ಯುವರಾಜ ಎಂದು ಚುಚ್ಚಿದ ಮೋದಿ, ಪ್ರೀತಿ ಹಂಚುವ ಅಂಗಡಿ ಇಟ್ಟಿದ್ದೇವೆ ಎಂದು ಹೇಳುವ ಯುವರಾಜರು, ದ್ವೇಷ ಹಂಚುವುದರಲ್ಲೇ ಮುಳುಗೇಳುತ್ತಾರೆ ಎಂದು ಕೆಣಕಿದರು.
ರಾಜ್ಯ ಸಭಾ ಸದಸ್ಯ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ರವನೀತ್ ಬಿಟ್ಟು ಅವರನ್ನು ಯುವರಾಜ ಅವರು ದೇಶದ್ರೋಹಿ ಎಂದು ಜರಿಯುತ್ತಾರೆ. ಅವರು ದೇಶದ್ರೋಹಿ ಎಂದು ಇಡೀ ಸಿಖ್ ಕುಲವನ್ನೇ ಅವಮಾನಿಸಿದ್ದಿರಾ ಎಂದು ಹೇಳಿದರು.
ನಿಮ್ಮ (ಕಾಂಗ್ರೆಸ್) ಆಡಳಿತ ಇದ್ದಾಗ ಆಡಳಿತ ನಡೆಸಲು ‘ರಿಮೋಟ್’ ಇಟ್ಟುಕೊಂಡಿದ್ರಿ. ಆದರೆ, ನನ್ನ ಕಂಟ್ರೋಲ್ ಮಾಡಲು 140 ಕೊಟಿ ರಿಮೋಟ್ಗಳಿವೆ ಎಂದು ವ್ಯಂಗ್ಯವಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.