ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕು ಪ್ರಸರಣ ತಡೆಗೆ ಜನರು ತಮ್ಮ ನಡುವೆಯೇ ‘ಮೈಕ್ರೊ ಕಂಟೈನ್ಮೆಂಟ್ವಲಯ’ ರಚಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು.
ಏಪ್ರಿಲ್ 11ರಿಂದ 14ರವರೆಗೆ ಲಸಿಕಾ ಹಬ್ಬ ‘ಟೀಕಾ ಉತ್ಸವ’ದ ಅಂಗವಾಗಿ ಅವರು ಮಾತನಾಡಿದರು. ಭಾನುವಾರ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ‘ತಮ್ಮ ಸಮೀಪದಲ್ಲಿ ಯಾರಾದರೂ ಸೋಂಕಿಗೆ ಒಳಗಾದರೆ, ಕುಟುಂಬಗಳು ಮತ್ತು ಸಮಾಜದ ಸದಸ್ಯರು ತಮ್ಮ ನಡುವೆಯೇ ಕಂಟೈನ್ಮೆಂಟ್ ವಲಯ ರಚಿಸಿಕೊಳ್ಳುವ ಮೂಲಕ ಪ್ರಸರಣ ತಡೆಯಬಹುದು. ಭಾರತದಂತಹ ಜನನಿಬಿಡ ದೇಶದಲ್ಲಿ ಸೋಂಕಿನ ವಿರುದ್ಧ ಹೋರಾಡಲು ಇದೊಂದು ಪ್ರಮುಖ ಮಾರ್ಗವಾಗಿದೆ’ ಎಂದು ಹೇಳಿದರು.
‘ಮೈಕ್ರೊ ಕಂಟೈನ್ಮೆಂಟ್ ವಲಯದ ಬಗ್ಗೆ ನಾವೆಷ್ಟು ಜಾಗೃತರಾಗಿದ್ದೇವೆ ಎಂಬುದರ ಮೇಲೆ ಅದರ ಯಶಸ್ಸು ನಿಂತಿದೆ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಹೋಗುವುದು, ಅರ್ಹರು ಲಸಿಕೆ ಪಡೆದುಕೊಳ್ಳುವುದು, ಕೋವಿಡ್ ಮಾರ್ಗಸೂಚಿಗಳನ್ನು ನಿಷ್ಠೆಯಿಂದ ಪಾಲಿಸುವುದರ ಮೇಲೆ ಮೇಲೆ ಯಶಸ್ಸು ನಿರ್ಧಾರವಾಗುತ್ತದೆ’ ಎಂದಿದ್ದಾರೆ.‘ಪ್ರತಿವೊಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಲಸಿಕೆ ಹಾಕಿಸಬೇಕು, ಪ್ರತಿಯೊಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಚಿಕಿತ್ಸೆ ಕೊಡಿಸಲು ನೆರವಾಗಬೇಕು, ಪ್ರತಿಯೊಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಸೋಂಕಿನಿಂದ ರಕ್ಷಿಸಬೇಕು’ – ಪ್ರತಿಯೊಬ್ಬ ನಾಗರಿಕ ಈ ಮೂರು ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ಮೋದಿ ಕರೆ ಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.