ಸಿಲಿಗುರಿ: ‘ಹಿಂದೂಸ್ತಾನದ ಬಗ್ಗೆ ಮಾತನಾಡುವ ಬದಲು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ರಾಯಭಾರಿಯ ರೀತಿ ದಿನಪೂರ್ತಿ ಅಲ್ಲಿಯದೇ ಮಾತನಾಡುತ್ತಿರುತ್ತಾರೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಲೆಳೆದಿದ್ದಾರೆ.
ಉತ್ತರ ಬಂಗಾಳದಲ್ಲಿ ಶುಕ್ರವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ರ್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
‘ಹಿಂದೂಸ್ತಾನದ ಬಗ್ಗೆ ಮಾತನಾಡುವ ಬದಲು, ಯಾಕೆ ಯಾವಾಗಲೂ ನಮ್ಮ ದೇಶವನ್ನು ಪಾಕಿಸ್ತಾನದ ಜೊತೆ ಹೋಲಿಸುತ್ತೀರಿ? ಪಾಕಿಸ್ತಾನದಂತಾಗಲು ನಾವೇನು ಬಯಸುವುದಿಲ್ಲ. ನಮ್ಮ ದೇಶವನ್ನು ನಾವು ಪ್ರೀತಿಸುತ್ತೇವೆ. ಅಲ್ಲಿನ ರಾಯಭಾರಿ ರೀತಿಯಲ್ಲಿ ದಿನಗಟ್ಟಲೇ ಪಾಕಿಸ್ತಾನದ ಬಗ್ಗೆಯೇ ಮೋದಿ ಮಾತನಾಡುತ್ತಿದ್ದಾರೆ’ ಎಂದು ಹೇಳಿದರು.
‘ನನಗೆ ಕೆಲಸವಿಲ್ಲ, ಉದ್ಯೋಗ ನೀಡಿ ಎಂದು ಯಾರಾದರೂ ಕೇಳಿದರೆ, ಅದಕ್ಕೆ ಪ್ರಧಾನಿ ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾರೆ. ಕೈಗಾರಿಕೆಗಳಿಲ್ಲ ಎಂದು ಯಾರಾದರು ಹೇಳಿದರೆ, ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾರೆ. ಪಾಕಿಸ್ತಾನದ ಬಗ್ಗೆ ಚರ್ಚೆಯನ್ನು ಪಾಕಿಸ್ತಾನ ಮಾಡುತ್ತದೆ. ನಾವು ಹಿಂದೂಸ್ತಾನದ ಬಗ್ಗೆ ಚರ್ಚೆ ಮಾಡೋಣ. ಇದು ನಮ್ಮ ಜನ್ಮಭೂಮಿ’ ಎಂದು ವಾಗ್ದಾಳಿ ನಡೆಸಿದರು.
‘ಸಂಸ್ಕೃತಿ ಮತ್ತು ಪರಂಪರೆಯಿಂದ ಶ್ರೀಮಂತವಾಗಿರುವ ಭಾರತವನ್ನು ಯಾಕೆ ಸದಾ ಪಾಕಿಸ್ತಾನದೊಂದಿಗೆ ಹೋಲಿಸುತ್ತೀರಾ’ ಎಂದು ಪ್ರಶ್ನಿಸಿದರು.
‘ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುವುದು ಹೇಗೆ ಎಂದು ಅವರಿಗೆ ಚೆನ್ನಾಗಿ ಗೊತ್ತು. ಆದರೆ, ಜನರ ಸ್ವತಂತ್ರ್ಯವನ್ನು ಕಾಪಾಡುವುದೇ ನನ್ನ ಧರ್ಮ. ಇದು ನಮ್ಮ ಎರಡನೇ ಸ್ವಾತಂತ್ರ್ಯ ಹೋರಾಟ. ಸ್ವಾತಂತ್ರ್ಯ ಬಂದು 70 ವರ್ಷವಾಗಿದ್ದರೂ ನಾವು ನಮ್ಮ ಪೌರತ್ವವನ್ನು ಸಾಬೀತುಪಡಿಸಿಕೊಳ್ಳಬೇಕು ಎನ್ನುವುದು ನಾಚಿಕೆಗೇಡಿನ ಸಂಗತಿ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.